ಶಾಂತಿಯುತ ಮತದಾನಕ್ಕೆ ಪರಿಪೂರ್ಣ ವ್ಯವಸ್ಥೆ
ನವದೆಹಲಿ, ಫೆ. 14– ರಾಜಕೀಯ ಪಕ್ಷಗಳ ಭವಿಷ್ಯಕ್ಕಿಂತ ವ್ಯಕ್ತಿಗಳಿಗೇ ಪ್ರಾಧಾನ್ಯ.
ನಾಳೆ ಮತದಾನ ಪ್ರಾರಂಭವಾಗಲಿರುವ ನಾಲ್ಕನೆಯ ಮಹಾ ಚುನಾವಣೆಯಲ್ಲಿ ಕಾಣುತ್ತಿರುವ ಮುಖ್ಯ ಅಂಶ.
ಸಾಮಾಜಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ, ಕ್ಲಿಷ್ಟ ಆರ್ಥಿಕ ಸ್ಥಿತಿ, ಆಹಾರ ಅಭಾವ, ಇತ್ತೀಚಿನ ವೈಪರೀತ್ಯಗಳ ಫಲವಾಗಿ ಭಾರತದಲ್ಲಿ ರಾಜಕೀಯ ಕಟ್ಟಡ ಕುಸಿಯಬಹುದೆಂದು ಸ್ವದೇಶ, ವಿದೇಶಗಳಲ್ಲಿ ಕೇಳಿಬರುತ್ತಿರುವ ಪಿಸುಣದ ಮಾತು ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ.
ಕಳೆದ ಮೂರು ಚುನಾವಣೆಗಳಲ್ಲಿದ್ದಂತೆ ರಾಷ್ಟ್ರದಲ್ಲಿ ಸುಭದ್ರ ಸ್ಥಿತಿಯನ್ನು ನೆಲಸುವಂತೆ ಮಾಡುವುದಾಗಿ ಆಶ್ವಾಸನೆ ಕೊಡುವ ನೆಹರು ಅವರಂತಹ ಆಕರ್ಷಕ ನಾಯಕ ಈ ಬಾರಿ ಇಲ್ಲ. ಅಲ್ಲದೆ ಆರ್ಥಿಕ ದುಃಸ್ಥಿತಿಯ ಹಿನ್ನೆಲೆಯಲ್ಲಿ ಪಂಚವಾರ್ಷಿಕ ಯೋಜನೆಯಿಲ್ಲದೆ ಆಡಳಿತ ಪಕ್ಷ ಚುನಾವಣಾ ಕಣಕ್ಕಿಳಿದಿದೆ.
***
ಶ್ರೀಮತಿ ಲಿಮಯೆ ದೂರು: ಲಿಮಯೆ ಮೇಲಿನ ಹಲ್ಲೆ ಹಿಂದೆ ಒಬ್ಬ ಸಚಿವರ ಕೈವಾಡ
ಮುಂಘೇರ್, ಫೆ. 14– ತಮ್ಮ ಪತಿ ಮಧುಲಿಮಯೆ ಅವರ ಮೇಲೆ ನಿನ್ನೆ ನಡೆದ ಹಲ್ಲೆ ಪೂರ್ವಯೋಜಿತವಾದ ಹಾಗೂ ಪೂರ್ವನಿರ್ದೇಶಿತವಾದ ಕೃತ್ಯವೆಂದು ಆಪಾದಿಸುವ ತಂತಿ ಸಂದೇಶಗಳನ್ನು ಶ್ರೀಮತಿ ಮಧುಲಿಮಯೆ ಅವರು ರಾಷ್ಟ್ರಪತಿ ಹಾಗೂ ಪ್ರಧಾನಮತ್ರಿ ಅವರಿಗೆ ಕಳುಹಿಸಿದ್ದಾರೆ.
ಈ ಕೃತ್ಯದ ಹಿಂದಿನ ಸಂಚಿನಲ್ಲಿ ವಿರೋಧ ಪಕ್ಷವೊಂದರ ಜೊತೆ ಕೇಂದ್ರ ಸಚಿವರೊಬ್ಬರು ಒಳಗಾಗಿದ್ದರೆಂದೂ ಶ್ರೀಮತಿ ಲಿಮಯೆ ಆಪಾದಿಸಿದ್ದಾರೆ.