ಕೊಪ್ಪಳ: ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಯೋಚಿಸಬೇಕು ಎಂದು ಯುವ ಮುಖಂಡ ಅಮರೇಶ ಕರಡಿ ಹೇಳಿದರು.
ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಅಂಕಗಳ ಹಿಂದೆ ಬಿದ್ದು, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡುವುದು ಕಡಿಮೆಯಾಗಿದೆ. ಎಲ್ಲ ಮಕ್ಕಳಲ್ಲೂ ಒಂದಲ್ಲ ಒಂದು ರೀತಿ ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದರು.
ಜಿತೇಂದ್ರ ತಾಲೇಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ಪ್ರವೀಣ ಮೆಹತಾ, ಹಿರಿಯ ಮುಖಂಡ ಚಾಂದ್ಪಾಷಾ ಕಿಲ್ಲೆದಾರ್, ಜಿಲ್ಲಾ ಸ್ವಚ್ಛ ಭಾರತ ಅಭಿಯಾನದ ರವಿಕುಮಾರ, ಖಾಸೀಂ ಅಲಿ ಹುಡೇದ, ಮುಖ್ಯಶಿಕ್ಷಕಿ ರೇಣುಕಾ ಅತ್ತನೂರ ಇದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ದೊಡ್ಡಮನಿ ನಿರೂಪಿಸಿದರು. ಎಸ್.ಜಿ.ಗೌಡರ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.