ಗೌರಿಬಿದನೂರು: ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶದಲ್ಲಿ ಧರ್ಮ, ಜಾತಿ, ಭಾಷೆಗಳ ನಡುವೆ ಉಂಟಾಗುತ್ತಿರುವ ಭಿನ್ನ ಮನಸ್ಸುಗಳನ್ನು ಒಂದುಗೂಡಿಸಬೇಕಾದ ಅನಿವಾರ್ಯತೆಯಿದೆ ಎಂದು ನಿವೃತ್ತ ಯೋಧ ಕ್ಯಾಪ್ಟನ್ ಸತೀಶ್ ತಿಳಿಸಿದರು.
ಪಟ್ಟಣದ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ಎಬಿವಿಪಿ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ನಮ್ಮ ದೇಶ ನಮ್ಮ ಪ್ರೀತಿ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ ಇತರೆ ದೇಶಗಳ ಸಂಸ್ಕೃತಿಗಿಂತ ಭಿನ್ನವಾಗಿರುವಂತದ್ದು. ಇಂದಿನ ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಇಂದು ಭಯೋತ್ಪಾದನೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರದ ಏಕತೆಯನ್ನು ಹೊಡೆಯುವ ಹುನ್ನಾರ ನಡೆಯುತ್ತದೆ. ಪ್ರತಿಯೊಬ್ಬರು ದೇಶ ಪ್ರೇಮ ಹೊಂದುವ ಮೂಲಕ ದೇಶವನ್ನು ರಕ್ಷಿಸಬೇಕಾಗಿದೆ ಎಂದರು.
ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ಇಸ್ರೇಲ್ನಲ್ಲಿ ವಿವಾಹದ ಸಮಯದಲ್ಲಿ ವರದಕ್ಷಿಣೆ ಬದಲಾಗಿ ದೇಶದ ಮಣ್ಣನ್ನು ನೀಡಿ ದೇಶಕ್ಕಾಗಿ ದುಡಿಯಿರಿ ಎಂದು ಪತಿಗೆ ಹೇಳುವ ಸಂಪ್ರದಾಯವಿದೆ. ನಾವು ಸಹ ಅಂತಹ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಎಇಎಸ್ ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ. ನಾಗರಾಜು, ಪದವಿ ಮೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ವಿ. ಕೃಷ್ಣಮೂರ್ತಿ, ಎಬಿವಿಪಿ ಜಿಲ್ಲಾ ಸಂಚಾಲಕ ಚರಣ್ ರೆಡ್ಡಿ, ಉಪನ್ಯಾಸಕ ಮದ್ದಿಲೇಟಿ ರಮೇಶ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.