ಹಾಸನ: ಆಧುನಿಕ ಸಮಾಜದಲ್ಲಿ ಬದುಕು ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಕಲ್ಗುಡಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ರಾಜೇಗೌಡ ಹೊಸಹಳ್ಳಿ ಅವರ ‘ಉದರದೊಳು ಹಸಿರುಕ್ಕಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಜಾನಪದ ಹಾಗೂ ಕನ್ನಡ ಸಂಸ್ಕೃತಿಯಲ್ಲಿ ರಾಜೇಗೌಡರ ಒಡನಾಟ ಉತ್ತಮವಾಗಿದೆ. ಅವರ ಬರವಣಿಗೆಯಲ್ಲಿ ಸೂಕ್ಷ್ಮತೆಗಳಿವೆ. ಸಂಘರ್ಷ ಮೀರಿದ ರಾಷ್ಟ್ರೀಯ ನೆಲೆಯನ್ನು ಗುರುತಿಸಬಹುದು ಎಂದು ತಿಳಿಸಿದರು.
ಸಾಹಿತಿ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಅರೆಮಲೆನಾಡು, ಬಯಲುನಾಡಿನ ಸೊಗಡು ರಾಜೇಗೌಡರ ಬರವಣಿಗೆಯಲ್ಲಿ ಪಸರಿಸಿದೆ. ಅಜ್ಜನ ತಾಳ್ಮೆ, ಅಪ್ಪನ ಆಧುನಿಕತೆಯನ್ನು ಅವರ ಕೃತಿಗಳಲ್ಲಿ ಕಾಣಬಹುದು ಎಂದು ಹೇಳಿದರು.
ಅವರ ಲೇಖನಗಳಲ್ಲಿ ಮಾತೃ, ಪಿತೃ, ಅಡವಿ ಸಂಸ್ಕೃತಿಯ ಭಾವನೆಗಳು ವ್ಯಕ್ತವಾಗುತ್ತವೆ. ಗಾಂಧೀಜಿ ಅವರ ಪ್ರಭಾವ ಇರುವುದನ್ನು ಗಮನಿಸಬಹುದು.
ಉಪನ್ಯಾಸಕ ರೋಹಿತ್ ಮಾತನಾಡಿದರು. ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜು, ಸಾಹಿತಿ ಶಹಬುದ್ದೀನ್, ಮಂಜೇಗೌಡ, ಹರಿದಾಸ್ಗೌಡ, ತೇಜಸ್ವಿನಿ, ವಿನಯ್ ಕಾರ್ಯಕ್ರಮದಲ್ಲಿ ಇದ್ದರು.