ವಿಜಯಪುರ: ಮಂಗಳೂರು ಸೇನಾ ನೇಮಕಾತಿ ಕಚೇರಿ ವತಿಯಿಂದ ಮೇ 12ರಿಂದ 18ರವರೆಗೆ ಪುರುಷ ಅಭ್ಯರ್ಥಿಗಳಿಗೆ ಭೂ ಸೇನಾ ನೇಮಕಾತಿ ರ್್ಯಾಲಿ ವಿಜಯಪುರ ನಗರದ ಸೈನಿಕ ಶಾಲೆ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದ್ದು, ವ್ಯವಸ್ಥಿತವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸೇನಾ ನೇಮಕಾತಿ ರ್್ಯಾಲಿ ಕುರಿತಂತೆ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 12 ಜಿಲ್ಲೆಗಳ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಅವಕಾಶ ಕಲ್ಪಿಸಲಾಗಿದ್ದು, ಈ ರ್್ಯಾಲಿ ಸುಗಮವಾಗಿ ನಡೆಯಲು ಈಗ ಅಧಿಕಾರಿಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವಂತೆ ಸೂಚನೆ ನೀಡಿದರು.
ರ್್ಯಾಲಿಯಲ್ಲಿ ಸುಮಾರು 18 ಸಾವಿರ ಅಭ್ಯರ್ಥಿಗಳು ಭಾಗವಹಿಸಲಿದ್ದು, ನಿತ್ಯ 500ರಿಂದ 600 ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕಾರಣ ಈ ರ್್ಯಾಲಿಗೆ ಸಕಲ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಪೂರ್ವಭಾವಿಯಾಗಿ ರ್್ಯಾಲಿ ನಡೆಯುವ ಸ್ಥಳ ವೀಕ್ಷಿಸಿ ಸೌಲಭ್ಯ ಕಲ್ಪಿಸಬೇಕು.
ಕ್ರೀಡಾಂಗಣ ಸ್ವಚ್ಛತೆ, ಪೊಲೀಸ್ ಬಂದೋಬಸ್ತ್, ನುರಿತ ವೈದ್ಯರನ್ನೊಳಗೊಂಡ ಸ್ಟಾಫ್ ನರ್ಸ್ರೊಂದಿಗೆ ಚಿಕಿತ್ಸಾ ಅಂಬ್ಯುಲೆನ್ಸ್ ವಾಹನ ಸೌಲಭ್ಯ, ಅಗ್ನಿಶಾಮಕ ವಾಹನ, ಸಿಬ್ಬಂದಿಗಳಿಗೆ ವಾಹನ ವ್ಯವಸ್ಥೆ, ದೂರವಾಣಿ ಮತ್ತು ಗಣಕೀಕರಣ ಸೌಕರ್ಯ, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಅವಶ್ಯಕತೆವಿದ್ದೆಡೆ ಶೌಚಾಲಯ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತದಿಂದ ಓರ್ವ ನೋಡಲ್ ಅಧಿಕಾರಿ, ಪೋಲಿಸ್ ಇಲಾಖೆ ವತಿಯಿಂದ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗುವುದು. ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ಇತರೆ ದಾಖಲಾತಿಗಳ ಪರಿಶೀಲನೆ ಕುರಿತ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ನೇಮಕಾತಿ ಅವಧಿಯಲ್ಲಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಸಿವಿಲ್ ಡ್ರೆಸ್ ಪೊಲೀಸರನ್ನು ನಿಯೋಜಿಸಲಾಗುತ್ತಿದ್ದು, ಈ ರ್್ಯಾಲಿಯನ್ನು ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಇದನ್ನು ಗಮನಿಸುವಂತೆ ತಿಳಿಸಿರುವ ಅವರು, ಮಧ್ಯವರ್ತಿಗಳಿಂದ ಯಾವುದೇ ರೀತಿಯ ಅಕ್ರಮ ನೇಮಕಾತಿಗೆ ಅವಕಾಶವಿರುವುದಿಲ್ಲ. ಕಾರಣ ಅಭ್ಯರ್ಥಿಗಳು ವಂಚನೆಗೊಳಗಾಗಬಾರದು ಎಂದು ತಿಳಿಸಿದರು.
ಮಂಗಳೂರು ಆರ್ಮಿ ರಿಕ್ರೂಟಿಂಗ್ ಕಚೇರಿ ನಿರ್ದೇಶಕ ಪ್ರಶಾಂತ ಪೇಟಕರ ಮಾತನಾಡಿ ಮಾರ್ಚ್ 2ರಿಂದ ಏಪ್ರಿಲ್ 25ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇ 1ರಂದು www.joinindianarmy.nic.in ವೆಬ್ ತಾಣದಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿ ಪಡಿಸಿದ ದಿನಾಂಕದಂದು ರ್್ಯಾಲಿಗೆ ಹಾಜರಾಗಬಹುದಾಗಿದೆ.
ಸೋಲ್ಜರ್ ಜಿಡಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಕ್ಲರ್ಕ್/ಎಸ್ಕೆಟಿ ಹಾಗೂ ಸೋಲ್ಜರ್ ಟ್ರೇಡ್ಸ್ಮನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಉಪ ವಿಭಾಗಾಧಿಕಾರಿ ಪರಶುರಾಮ ಮಾದರ, ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ ಉಪ ನಿರ್ದೇಶಕ ಮೇಜರ್ ಡಿ.ಎಚ್.ಹೂಗಾರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಅಭ್ಯರ್ಥಿಗಳು ರ್್ಯಾಲಿ ಸ್ಥಳಕ್ಕೆ ಮೂಲ ದಾಖಲಾತಿ ತರುವ ಅವಶ್ಯಕತೆ ಇರುವುದಿಲ್ಲ. ಅದರಂತೆ ಮಧ್ಯವರ್ತಿಗಳಿಗೂ ಮೂಲ ದಾಖಲಾತಿ ನೀಡದಿರಿ
ಪ್ರಶಾಂತ ಪೇಟಕರ, ಆರ್ಮಿ ರಿಕ್ರೂಟಿಂಗ್ ಕಚೇರಿ ನಿರ್ದೇಶಕ