ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ: ಭುಗಿಲೆದ್ದ ಜನಾಕ್ರೋಶ

2ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಉಪವಾಸ ಸತ್ಯಾಗ್ರಹ; ವ್ಯಾಪಕ ಜನ ಬೆಂಬಲ, ಹಲವು ಸಂಘಟನೆಗಳ ಸದಸ್ಯರು ಭಾಗಿ
Last Updated 15 ಫೆಬ್ರುವರಿ 2017, 12:49 IST
ಅಕ್ಷರ ಗಾತ್ರ

ಗದಗ: ಕಪ್ಪತಗುಡ್ಡವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಮರು ಘೋಷಣೆ ಮಾಡುವಂತೆ ಒತ್ತಾಯಿಸಿ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸಂಘ ಟನೆಗಳ ವತಿಯಿಂದ ಗದುಗಿನ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಂಗಳವಾರ ಎರಡನೆಯ ದಿನಕ್ಕೆ ಕಾಲಿಟ್ಟಿದೆ.

ಎರಡನೆ ದಿನವೂ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲ  ವ್ಯಕ್ತವಾಯಿತು. ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು ಧರಣಿ ವೇದಿ ಕೆಗೆ ಬಂದು ಬೆಂಬಲ ವ್ಯಕ್ತಪಡಿಸಿದರು. ರೋಣದ ರಾಜೀವ ಗಾಂಧಿ ಆಯು ರ್ವೇದ ಕಾಲೇಜು ಮುಂಡರಗಿಯ ಆಯು ರ್ವೇದ ಕಾಲೇಜಿನ ನೂರಾರು ವೈದ್ಯ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿ ದರು. ನಗರದ 25ನೇ ವಾರ್ಡ್ ಸಾರ್ವಜನಿಕರು ಮತ್ತು ಬಿಪಿನ್ ಚಿಕ್ಕಟ್ಟಿ ಶಾಲೆಯ ನೂರಾರು ವಿದ್ಯಾರ್ಥಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಗಾಂಧಿ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಡಂಬಳದಲ್ಲಿ ನಡೆದ ಸಾರ್ವಜನಿಕ ಸಮಾಲೋಚನಾ ಸಭೆ ಯಲ್ಲಿ ಶೇ 99ರಷ್ಟು ಜನಾಭಿಪ್ರಾಯವು ಕಪ್ಪತಗುಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನ ಮುಂದುವರಿಸ ಬೇಕು ಎನ್ನುವುದರ ಪರವಾಗಿ ಬಂದಿ ದ್ದರೂ, ಮರು ಆದೇಶ ಹೊರಡಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಫೆ.15ರ ಸಂಜೆ 5 ಗಂಟೆಯೊಳಗಾಗಿ ಸರ್ಕಾರದ ಸ್ಪಷ್ಟ ನಿಲುವು ಪ್ರಕಟಗೊಳ್ಳ ದಿದ್ದರೆ, ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ಸೋಮವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಧರಣಿ ವೇದಿಕೆಯಲ್ಲಿ, ಲಂಬಾಣಿ ಸಮುದಾಯದ ಕಲಾವಿದರು ಹೋರಾಟ ಬೆಂಬಲಿಸಿ ಜಾನಪದ ಹಾಗೂ ಕ್ರಾಂತಿ ಗೀತೆಗಳನ್ನು ಹಾಡಿದರು. ಮಂಗಳವಾರ ಬೆಳಿಗ್ಗೆ ಪತಂಜಲಿ ಯೋಗ ಸಂಸ್ಥೆ ವತಿಯಿಂದ ಧರಣಿ ವೇದಿಕೆ ಎದುರು ಯೋಗಾಸನ ನಡೆಯಿತು. ರಕ್ತದಲ್ಲಿ ಪತ್ರ ಬರೆಯುವ ಚಳವಳಿಗೆ ಎಸ್‌.ಆರ್‌. ಹಿರೇಮಠ ಚಾಲನೆ ನೀಡಿ ದರು. ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಜೆಡಿಯು ಪಕ್ಷದ ಮಹಿಮಾ ಪಟೇಲ್ ಇದ್ದರು.

ಉಪವಾಸ ನಿರತರು ಅಸ್ವಸ್ಥ; ಆಕ್ರೋಶ: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ  ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ, ಜನ ಸಂಗ್ರಾಮ ಪರಿಷತ್‌ನ ಪ್ರತಿಮಾ ನಾಯಕ್‌, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ರವಿಕಾಂತ ಅಂಗಡಿ, ದಲಿತ ಮುಖಂಡ ಎಲ್‌.ನಾರಾಯಣ ಸ್ವಾಮಿ, ನಿವೃತ್ತ ಅಬ ಕಾರಿ ಅಧಿಕಾರಿ ಲಿಂಗೇಗೌಡರ, ಸಾಮಾ ಜಿಕ ಹೋರಾಟಗಾರ ವೀರಣ್ಣ ಹೊನಗ ಣ್ಣನವರ, ಯೋಗಾಚಾರ್ಯ ಕೆ.ಎಸ್‌. ಪಲ್ಲೇದ, ವಿನೂತನ ಸಂಸ್ಥೆಯ ನಿಂಗ ರಾಜ ನಿಡುವಣಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಇವರಲ್ಲಿ ಮಂಗಳವಾರ ಬೆಳಗಿನ ಜಾವ ಇಬ್ಬರು ಅಸ್ವಸ್ಥಗೊಂ ಡರು. ಕೂಡಲೇ ವೈದ್ಯರು ಅವರನ್ನು ಪರೀಕ್ಷೆಗೆ ಒಳಪಡಿಸಿದರು. ಆದರೆ, ತಪಾ ಸಣೆಗೆ ಬಂದ ವೈದ್ಯರು, ಕೇವಲ ರಕ್ತ ದೊತ್ತಡ ಪರೀಕ್ಷಿಸುವ ಉಪಕರಣ ಮಾತ್ರ ತಂದಿದ್ದಾರೆ, ಮಧುಮೇಹ ಪರೀಕ್ಷಿಸುವ ಉಪಕರಣ ತಂದಿಲ್ಲ ಎಂದು ಪ್ರತಿಭಟನಾ ಕಾರರು ಜಿಲ್ಲಾ ಆರೋಗ್ಯ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆರೋಗ್ಯ ಅಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸೋಮವಾರದಿಂದ ಧರಣಿ ನಡೆಯುತ್ತಿದ್ದರೂ ಜಿಲ್ಲಾಡಳಿತ ವೈದ್ಯರು ಮತ್ತು ಅಂಬುಲೆನ್ಸ್‌ ನಿಯೋಜಿ ಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಗಳ ಅಭಯ: ಸೋಮವಾರ ರಾತ್ರಿ 11:30ರ ಸುಮಾರಿಗೆ ಧರಣಿ ವೇದಿಕೆಗೆ ಬಂದ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ತಡರಾತ್ರಿ 3 ಗಂಟೆ ವರೆಗೆ ವೇದಿಕೆಯಲ್ಲಿ ಕುಳಿತು ಹೋರಾಟ ಗಾರರಿಗೆ ಧೈರ್ಯ ತುಂಬಿದರು. ಹಿರಿಯ ಸಾಹಿತಿಗಳ ಬೆಂಬಲ: ಮಂಗಳ ವಾರ ಸಂಜೆ ಧರಣಿ ನಿರತ ಸ್ಥಳಕ್ಕೆ ಕವಿ ಚನ್ನವೀರ ಕಣವಿ, ಸಾಹಿತಿ ಗುರುಲಿಂಗ ಕಾಪಸೆ ಆಗಮಿಸಿ ಬೆಂಬಲ ಸೂಚಿಸಿದರು. ಆರ್.ಟಿ.ಐ ಕಾರ್ಯಕರ್ತ ರಾಜಶೇಖರ ಮುಲಾಲಿ, ಬಸವ ಕಲ್ಯಾಣ ಮಠದ ಶಿವಾನಂದ ಸ್ವಾಮಿಜಿ ಕೂಡ ಬೆಂಬಲ ಸೂಚಿಸಿದರು.

ಜಿಲ್ಲಾಧಿಕಾರಿ ಭೇಟಿ; ಮನವಿ

ಜಿಲ್ಲಾಧಿಕಾರಿ ಮನೋಜ್ ಜೈನ್‌ ಮತ್ತು ಎಸ್ಪಿ ಸಂತೋಷಬಾಬು ಅವರು ಮಂಗಳವಾರ ಸಂಜೆ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದರು. ಉಪವಾಸ ನಿರತರಿಗೆ ವೈದ್ಯಕೀಯ ಸೇವೆ ಒದಗಿಸುವಲ್ಲಿ ಡಿಎಚ್‌ಒ ನಿರ್ಲ್ಯಕ್ಷ ವಹಿಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಉಪವಾಸ ನಿರತರು ಜಿಲ್ಲಾಧಿಕಾರಿಗೆ ದೂರಿದರು.

ಬಳಿಕ ಸಿದ್ಧಲಿಂಗ ಸ್ವಾಮೀಜಿ ಅವರು, ಕಪ್ಪತಗುಡ್ಡ ಉಳಿಸುವಂತೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಾಪ ಬಹಿಷ್ಕಾರ ಬೈಕ್‌ ರ್‍ಯಾಲಿ: ಬುಧವಾರ ಕೋರ್ಟ್‌ ಕಲಾಪ ಬಹಿಷ್ಕರಿಸಿ ಕಪ್ಪತಗುಡ್ಡ ಹೋರಾಟಕ್ಕೆ ಬೆಂಬಲ ಸೂಚಿಸಿ ಬೈಕ್‌ ರ್‍ಯಾಲಿ ನಡೆಸಲು ಜಿಲ್ಲಾ ವಕೀಲರ ಸಂಘ ನಿರ್ಧರಿಸಿದೆ.

ಸರ್ಕಾರದ ನಿಲುವೇನು ?
ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನ ಮುಂದುವರಿಸುವಲ್ಲಿ ಸರ್ಕಾರದ ಸ್ಪಷ್ಟ ನಿಲುವು ಏನು ಎನ್ನುವುದನ್ನು, ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಅವರು ಫೆ.15, ಸಂಜೆ 5ಗಂಟೆ ಒಳಗಾಗಿ ಗದುಗಿನಲ್ಲಿ ಹೋರಾಟ ನಿರತರ ಮುಂದೆ ಸ್ಪಷ್ಟಪಡಿಸಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.

* ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನಮಾನ ನೀಡದಿದ್ದರೆ, ಸಚಿವ ಎಚ್‌.ಕೆ. ಪಾಟೀಲರ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತದೆ. ಅವರನ್ನು ಮತದಾರರು ಮನೆಗೆ ಕಳುಹಿಸುತ್ತಾರೆ
ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್‌ನ ರಾಜ್ಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT