ಹೂವಿನಹಡಗಲಿ: ಇದೇ 19, 20 ರಂದು ಪಟ್ಟಣದಲ್ಲಿ ಜರುಗಲಿರುವ 20ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ. ಮನು ಬಳಿಗಾರ ಮಂಗಳವಾರ ಬಿಡುಗಡೆಗೊಳಿಸಿದರು.
ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ, ಸಂಸ್ಕೃತಿ, ಕನ್ನಡ ಅಭಿಮಾನ ಜಾಗೃತ ಸ್ಥಳದಲ್ಲಿ ಜಿಲ್ಲಾ ಸಮ್ಮೇಳನ ಸಂಘಟಿಸಿರುವುದು ಅರ್ಥಪೂರ್ಣವಾಗಿದೆ. ಹಿರಿಯ ಲೇಖಕ ದುರ್ಗಾದಾಸ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.
ಭಾಷೆ, ಸಂಸ್ಕೃತಿ ಬೆಳೆಸುವ ಕೆಲಸಗಳಿಗೆ ಸಾಕಷ್ಟು ಅನುದಾನ ನೀಡಿ ಕರ್ನಾಟಕ ಸರ್ಕಾರ ದೇಶಕ್ಕೇ ಮಾದರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಭಾಷೆ, ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕಿದೆ. ಅನ್ಯ ಭಾಷಿಕರ ಲಕ್ಷ್ಯವನ್ನು ಸೆಳೆದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮೆರೆಸಲು ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಿವೆ. ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡು, ಸ್ಥಳೀಯ ಸಂಸ್ಥೆಗಳಿಂದ ಹೆಚ್ಚಿನ ನೆರವು ಪಡೆದು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಸಂಘಟಿಸಬೇಕು ಎಂದು ಹೇಳಿದರು.
ಈ ಭಾಗದ ಹಿರಿಯ ಸಾಹಿತಿ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಅವರ ‘ಬಸವತತ್ವ ರತ್ನಾಕರ’ ಕೃತಿಯ ಮರು ಮುದ್ರಣ ಕುರಿತು ಪತ್ರಕರ್ತರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಬಳಿಗಾರ್, ಪುಸ್ತಕಗಳ ಮರುಮುದ್ರಣಕ್ಕೆ ಬಳಸುವ ಸಾರ್ವಜನಿಕರ ಹಣ ವ್ಯರ್ಥವಾಗದಂತೆ ನಿಯಮ ರೂಪಿಸಲಾಗಿದೆ. ಓದುಗರ ಬೇಡಿಕೆ ಇರುವ ಯೋಗ್ಯ ಪುಸ್ತಕಗಳನ್ನು ಮಾತ್ರ ಮರುಮುದ್ರಣ ಮಾಡುವ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಚಂದ್ರಶೇಖರ ಶಾಸ್ತ್ರಿ ಅವರ ಕೃತಿಗೆ ಇಲ್ಲಿಂದ ಬೇಡಿಕೆ ಬಂದಲ್ಲಿ ಮರುಮುದ್ರಣ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿದರು. ತಹಶೀಲ್ದಾರ್ ರಾಘವೇಂದ್ರ ರಾವ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಂ.ಪಿ.ಎಂ. ಮಂಜುನಾಥ, ಸಾಹಿತಿಗಳಾದ ಎಚ್.ಶೇಷಗಿರಿರಾವ್, ಶಾಂತಮೂರ್ತಿ ಕುಲಕರ್ಣಿ, ಡಾ. ಅಂಜನಾ ಕೃಷ್ಣಪ್ಪ, ತೋ.ಮ. ಶಂಕ್ರಯ್ಯ ಇದ್ದರು.