ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಚರ್ಚೆಯಲ್ಲಿ, ಜೆಡಿಎಸ್ನ ಬಸವರಾಜ ಹೊರಟ್ಟಿಯವರು ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಾಗಿದೆ. ಆದರೆ ಇದೇ ಸಮಯದಲ್ಲಿ ಅವರನ್ನೂ ಒಳಗೊಂಡಂತೆ ಚರ್ಚೆಯಲ್ಲಿ ಭಾಗವಹಿಸಿದ್ದ ಇತರರು, ಹಿಂದಿ ರಾಷ್ಟ್ರಭಾಷೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಸರಿಯಲ್ಲ.
ಹಿಂದಿ ಭಾರತದ ರಾಷ್ಟ್ರಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಈ ಅರಿವಿರಬೇಕಾದ ಶಾಸನಸಭೆಯ ಸದಸ್ಯರೇ ಹೀಗೆ ತಪ್ಪು ಅಭಿಪ್ರಾಯ ಹೊಂದಿರುವುದು ವಿಪರ್ಯಾಸ. ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚಿತವಾದ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಗೆ ಸಿಗಬೇಕಾದ ಮಾನ್ಯತೆಯನ್ನು ರಾಜ್ಯಪಾಲರು ಕಡೆಗಣಿಸಿದಾಗ, ಕರ್ನಾಟಕದ ಶಾಸಕರು ಅಂದೇ ಪ್ರತಿಕ್ರಿಯಿಸಬೇಕಿತ್ತು. ಅದು ಬಿಟ್ಟು ಆಗ ಅವರು ಉಸಿರೆತ್ತದೇ ಶರಣಾಗಿದ್ದು, ನಂತರದಲ್ಲಿನ ಚರ್ಚೆಯಲ್ಲೂ ಭಾಷಣಕ್ಕೆ ಸಮಜಾಯಿಷಿ ನೀಡಿದ್ದು ನಾಚಿಕೆಗೇಡು.
- ಕಲ್ಯಾಣರಾಮನ್ ಚಂದ್ರಶೇಖರನ್, ಬೆಂಗಳೂರು