ಹೊಸನಗರ: ಸರ್ಕಾರಿ ಶಾಲೆಯಲ್ಲಿ ಕಲಿತವರಿಗೆ ಸರ್ಕಾರಿ ಕೆಲಸದಲ್ಲಿ ಆದ್ಯತೆ ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳು ಉಳಿಯಬಲ್ಲವು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಚಂದ್ರಮೌಳಿ ಅಭಿಪ್ರಾಯಪಟ್ಟರು.
ಬುಧವಾರ ತಾಲ್ಲೂಕಿನ ಮುಳುಗುಡ್ಡೆ ಪ್ರಾಥಮಿಕ ಶಾಲೆಯಲ್ಲಿ 12 ಶಾಲೆಗಳ ಕ್ಲಸ್ಟರ್ ಮಟ್ಟದ ಓದು, ಬರಹ, ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಯ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಉತ್ತಮ ಆಗಿದ್ದರೂ ಸಹ ಅನಧಿಕೃತ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಯ ಜತೆಗಿನ ಪೈಪೋಟಿಯ ಕಾರಣ ಮಕ್ಕಳ ಸಂಖ್ಯೆ ಇಳಿಮುಖ ಆಗುತ್ತಿದೆ ಎಂದು ವಿಷಾದಿಸಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಚ್.ಆರ್.ಸತೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕ ಡಿ.ಆರ್.ಅಶೋಕ್, ಜೇನಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಹರೀಶ್ ಕಲ್ಯಾಣಪ್ಪ ಗೌಡ, ಕೆ.ಎಂ. ಚಂದ್ರಶೇಖರ, ಗಾಳಿಯೂರು ಶಿವಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ವಿ. ರೇವಣಪ್ಪ ಗೌಡ, ಸರ್ವ ಶಿಕ್ಷಣ ಅಭಿಯಾನದ ಸುಬ್ರಹ್ಮಣ್ಯ, ಮುಖ್ಯ ಶಿಕ್ಷಕ ಎಚ್.ಆರ್.ಗಂಗಾಧರಯ್ಯ ಮತ್ತಿತರರು ಹಾಜರಿದ್ದರು.
ಪಠ್ಯ ಪುಸ್ತಕದ ಓದುವ, ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ 12 ಶಾಲೆಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉಮೇಶ್ ಚೊಟ್ಟಣ್ಣನವರ ಸ್ವಾಗತಿಸಿದರು. ಶಿಕ್ಷಕಿ ದಾಕ್ಷಾಯಿಣಿ ಹಾಲಗದ್ದೆ ಕಾರ್ಯಕ್ರಮ ನಿರೂಪಿಸಿದರು.