ಕಲಬುರ್ಗಿ: 371 (ಜೆ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ ಅವರು 371 (ಜೆ) ಕೋಶದ ಜಂಟಿ ಕಾರ್ಯದರ್ಶಿ ಕೆ.ಎಲ್. ಲೋಕನಾಥ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
‘ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ 3ರಿಂದ 5ವರ್ಷ ವಯಸ್ಸಿನ ವಿನಾಯಿತಿ ನೀಡಬೇಕು. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಕನಿಷ್ಠ 10ರಿಂದ 15 ಕೃಪಾಂಕ ನೀಡಬೇಕು. 371 (ಜೆ) ಅನುಷ್ಠಾನದಲ್ಲಿ ಉದ್ಭವಿಸುವ ಗೊಂದಲಗಳ ನಿವಾರಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಹೈದರಾಬಾದ್ ಕರ್ನಾಟಕ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಶೇ 8ರಷ್ಟು ಸ್ಥಾನಗಳು ಈ ಭಾಗದವರಿಗೆ ದೊರಕುತ್ತಿಲ್ಲ. ಡೀಮ್ಡ್ ವಿಶ್ವವಿದ್ಯಾಲಯಗಳು ವೈದ್ಯಕೀಯ ಸೀಟುಗಳನ್ನು ನೀಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿರುವವಿಶ್ವವಿದ್ಯಾಲಯಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆಯುವ ಅಭ್ಯರ್ಥಿಗಳನ್ನು ಸ್ಥಳೀಯ ಅಭ್ಯರ್ಥಿಗಳು ಎಂದು ನೇಮಕ ಮಾಡದೆ ರಾಜ್ಯ ಮಟ್ಟದಲ್ಲಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
‘371 (ಜೆ) ಕಾಯ್ದೆಗೆ ತಿದ್ದುಪಡಿ’
ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಕೃಷಿ, ಕೈಗಾರಿಕೆ, ಬುದ್ಧಿ ಜೀವಿಗಳು, ಸರ್ಕಾರೇತರ ಸಂಘ–ಸಂಸ್ಥೆಗಳ ಪ್ರತಿನಿಧಿಗಳನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು. ಪ್ರೊ.ಬಸವರಾಜ ಕುಮನೂರ, ಪ್ರೊ.ಛಾಯಾ ದೇಗಾಂವಕರ್, ಸಂಗೀತಾ ಕಟ್ಟಿಮನಿ ಇದ್ದರು.
‘ಹೈದರಾಬಾದ್ ಕರ್ನಾಟಕ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಶೇ 8ರಷ್ಟು ಮೀಸಲಾತಿ ನೀಡುವುದು ಮತ್ತು ಹಿಂದುಳಿದಿರುವಿಕೆ, ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ಜಾರಿ ಸಂಬಂಧ 371 (ಜೆ) ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.
‘ಶೇ 8ರಷ್ಟು ಮೀಸಲಾತಿ ಸಂಬಂಧ 2016ರ ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೂ ಮುನ್ನ ನಡೆದಿರುವ ನೇಮಕಾತಿ ಸಂಬಂಧ ನೇಮಕಾತಿ ಪ್ರಾಧಿಕಾರದಿಂದ ವಿವರಣೆ ಪಡೆಯಲಾಗುವುದು. ಅರಣ್ಯ ಇಲಾಖೆಯಲ್ಲಿ ನಡೆದ 475 ಹುದ್ದೆಗಳ ಭರ್ತಿಯಲ್ಲಿ ಶೇ 8ರಷ್ಟು ಮೀಸಲಾತಿ ನೀಡಿಲ್ಲ ಎಂಬ ದೂರು ಬಂದಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಮೂಲಗಳು ಹೇಳುತ್ತವೆ.
* 371 (ಜೆ) ಕಾಯ್ದೆ ಅನ್ವಯ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಕನಿಷ್ಠ 10ರಿಂದ 15 ಕೃಪಾಂಕ ನೀಡಬೇಕು
ವೈಜನಾಥ ಪಾಟೀಲ, ಅಧ್ಯಕ್ಷ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ