ಚಿತ್ತಾಪುರ: ಈಚಲು ಮರಗಳು ಇಲ್ಲವೆಂದು ವರದಿ ಬಂದ ಕಾರಣ ಸೇಂದಿ ನಿಷೇಧ ತೆರವುಗೊಳಿಸಿಲ್ಲ, ಪ್ರಸ್ತುತ ಒಂದು ವಾರದಲ್ಲಿ ಕಲಬುರ್ಗಿ, ಯಾದಗಿರ, ರಾಯಚೂರ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿ ಈಚಲು ಮರಗಳ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ.
ಈಚಲು ಮರಗಳು ಇವೆ ಎಂಬ ವರದಿ ಬಂದರೆ ನೀರಾ (ಸೇಂದಿ) ಮಾರಾಟ ಪುನರಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಾಲ್ಲೂಕು ಆರ್ಯ ಈಡಿಗ ಸಮಾಜದ ಮುಖಂಡರು ತಿಳಿಸಿದ್ದಾರೆ.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ ನೇತೃತ್ವ ದಲ್ಲಿ ಚಿತ್ತಾಪುರ, ಸೇಡಂ, ಚಿಂಚೋಳಿ, ಯಾದಗಿರ, ದೇವದುರ್ಗ, ರಾಯಚೂರ ತಾಲ್ಲೂಕುಗಳ ಈಡಿಗ ಸಮಾಜದ ಮುಖಂಡರ ನಿಯೋಗವು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದಾಗ ಈ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
2012ರಲ್ಲಿ ಈಚಲು ಮರಗಳ ಸಮೀಕ್ಷೆ ಕಾರ್ಯ ನಡೆದಿದೆ. ಆರು ತಾಲ್ಲೂಕುಗಳಲ್ಲಿ 8 ರಿಂದ 10 ಲಕ್ಷ ಈಚಲು ಮರಗಳಿವೆ ಎಂದು ಕಂದಾಯ, ಅರಣ್ಯ ಮತ್ತು ಅಬಕಾರಿ ಇಲಾಖೆಗಳ ಜಂಟಿ ಸಮೀಕ್ಷೆ ವರದಿ ತಿಳಿಸಿದೆ. ಈಡಿಗರ ಕುಲಕಸುಬು ನೀರಾ (ಸೇಂದಿ) ಮಾರಾ ಟಕ್ಕೆ ಅನುಮತಿ ನೀಡಬೇಕೆಂದು ಸಚಿವ ಪ್ರಿಯಾಂಕ್ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.ಅದಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಡಾ.ಉಮೇಶ ಜಾಧವ ಬೆಂಬಲಿಸಿದರು.
ಸಚಿವ ಈಶ್ವರ ಖಂಡ್ರೆ, ಡಾ. ಅಜಯಸಿಂಗ್, ಅಂತಯ್ಯ ಇದ್ದರು.