ಕಕ್ಕೇರಾ: ಕಕ್ಕೇರಾ ಪಟ್ಟಣದ ವಾಲ್ಮೀಕಿ ವೃತ್ತದಿಂದ ಸೋಮನಾಥ ದೇವ ಸ್ಥಾನದವರೆಗಿನ ರಸ್ತೆಯಲ್ಲಿ ಹಾಕ ಲಾಗಿರುವ ಬೀದಿ ದೀಪಗಳು ಕಳೆದ ಆರು ತಿಂಗಳಿನಿಂದ ಉರಿಯುತ್ತಿಲ್ಲ.
ಈ ರಸ್ತೆಯಲ್ಲಿರುವ ಸುಮಾರು 45ಕ್ಕೂ ಹೆಚ್ಚು ಸೋಲಾರ್ ದೀಪಗಳ ಬ್ಯಾಟರಿಗಳನ್ನು ದುಷ್ಕರ್ಮಿಗಳು ಕಳವು ಮಾಡುತ್ತಿದ್ದಾರೆ. ಆದರೆ, ಇದನ್ನು ತಡೆಯಲು ಪುರಸಭೆ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಪುರಸಭೆ ಗ್ರಾ.ಪಂ ಆಗಿದ್ದ ಸಂದರ್ಭದಲ್ಲಿ ಆಗ ಸಚಿವರಾಗಿದ್ದ ರಾಜೂಗೌಡ ಅವರು ಸೋಮನಾಥ ದೇವಸ್ಥಾನದಿಂದ ಜಕ್ಕಪ್ಪ ದೇಸಾಯಿ ಮಂದಿರವರೆಗೆ ರಸ್ತೆ ವಿಸ್ತರಣೆ ಮಾಡಿಸಿ, ಸಿಸಿ ರಸ್ತೆ ನಿರ್ಮಿಸಿದ್ದರು. ಅಲ್ಲದೇ, ರಸ್ತೆ ವಿಭಜಕದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದ್ದರು. ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅನುಕೂಲವಾಗಿತ್ತು. ಕೆಲವು ದುಷ್ಕರ್ಮಿಗಳು ಸೋಲಾರ್ ದೀಪ, ಬ್ಯಾಟರಿ ಮತ್ತು ಕಂಬಗಳನ್ನು ಕಳವು ಮಾಡಿದ್ದಾರೆ.
ಇದನ್ನು ಪುರಸಭೆ ಮುಖ್ಯಾಧಿಕಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಸಾರ್ವಜನಿಕರ ದೂರಾಗಿದೆ. ಈ ರಸ್ತೆಯಲ್ಲಿ ಬೀದಿ ದಿಪಗಳು ಇಲ್ಲದ ಕಾರಣ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ರಾತ್ರಿ ವೇಳೆ ಓಡಾಡಲು ಭಯಪಡಬೇಕಾದ ಸ್ಥಿತಿ ನಿರ್ಮಾಣ ವಾಗಿದೆ. ಕೂಡಲೇ ಬೀದಿ ದಿಪಗಳನ್ನು ದುರಸ್ತಿ ಮಾಡಿಸಬೇಕು ಮತ್ತು ರಾತ್ರಿ ವೇಳೆ ಗಸ್ತಿಗೆ ಪೊಲೀಸರನ್ನು ನಿಯೋಜಿ ಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
* ಸೋಲಾರ್ ಬ್ಯಾಟರಿ ಮತ್ತು ಬಲ್ಬ್ಗಳ ಕಳವಿಗೆ ಪುರಸಭೆಯ ನಿರ್ಲಕ್ಷ್ಯವೇ ಕಾರಣ. ಕೂಡಲೇ ಅವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು
- ಗಂಗಾಧರ ಪತ್ತಾರ, ನಿವಾಸಿ
* ಪೊಲೀಸ್ ಸಿಬ್ಬಂದಿ ರಾತ್ರಿ ವೇಳೆ ಗಸ್ತು ತಿರುಗುವುದಿಲ್ಲ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಗಸ್ತಿಗೆ ಪೊಲೀಸರನ್ನು ನಿಯೋಜಿಸಬೇಕು
ಶರಣುಕುಮಾರ, ಪುರಸಭೆ ಸದಸ್ಯ