ಮುನಿರಾಬಾದ್: ಬಂಡಿಹರ್ಲಾಪುರ ಗ್ರಾಮದ ಬಳಿ ಬುಧವಾರ ಬೈಕ್ ಪಾದಚಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ವೃದ್ಧರೊಬ್ಬರು ಮೃತಪಟ್ಟು, ಬೈಕ್ಸವಾರ ಗಾಯಗೊಂಡಿದ್ದಾರೆ
ಮೃತಪಟ್ಟ ವೃದ್ಧನನ್ನು ಶಿವಪುರ ಗ್ರಾಮದ ಹನುಮಪ್ಪ ಮರಿಯಪ್ಪ ಹರಿಜನ (78)ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಚಾಲಕನ ಸಾವು: ಕನಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬುಧವಾರ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಲಾರಿಯ ಚಾಲಕ ರಸ್ತೆ ಉಬ್ಬುದಾಟಿಸುವ ಸಮಯದಲ್ಲಿ ಹಠಾತ್ತಾಗಿ ಬ್ರೇಕ್ ಹಾಕಿದ ಪರಿಣಾಮ ಸರಳುಗಳು ಮತ್ತು ಸ್ಟೇರಿಂಗ್ ಮಧ್ಯೆ ಸಿಲುಕಿಕೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಾರಿ ಮಹಾರಾಷ್ಟ್ರ ನೊಂದಣಿ ಸಂಖ್ಯೆಯನ್ನು ಹೊಂದಿದ್ದು ಚಾಲಕನ ಹೆಸರು ತಿಳಿದುಬಂದಿರುವುದಿಲ್ಲ. ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡ: ಹೊಸಹಳ್ಳಿ ಗ್ರಾಮದ ವೀರಭದ್ರಪ್ಪ ಆಡೂರ ಮತ್ತು ಮಾರುತೆಪ್ಪ ಮೆಳ್ಳಿಕೇರಿ ರೈತರಿಗೆ ಸೇರಿದ ಎರಡು ಭತ್ತದ ಹುಲ್ಲಿನ ಬಣವೆಗಳಿಗೆ ಮಂಗಳವಾರ ರಾತ್ರಿ ಬೆಂಕಿ ಬಿದ್ದು ಸುಟ್ಟು ಹೋಗಿದೆ.
ಹುಲ್ಲಿನ ಮೌಲ್ಯ ಸುಮಾರು ₹1.5ಲಕ್ಷ ಎಂದು ಅಂದಾಜಿಸಲಾಗಿದೆ. ರೈತರಿಗೆ ಉಂಟಾದ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಕಂಬಳಿ ಆಗ್ರಹಿಸಿದ್ದಾರೆ.
ಸವಾರ ಸಾವು
ಕುಷ್ಟಗಿ: ತ್ರಿಚಕ್ರ ವಾಹನ ಮಗುಚಿ ಮಂಗಳವಾರ ರಾತ್ರಿ ತೀವ್ರವಾಗಿ ಗಾಯಗೊಂಡಿದ್ದ ತಾಲ್ಲೂಕಿನ ಹನುಮಸಾಗರ ಮೂಲದ ಅಂಗವಿಕಲ ಪರಸಪ್ಪ ಹುಲುಗಪ್ಪ ಭೋವಿ (42) ಎಂಬುವವರು ಬುಧವಾರ ಮೃತಪಟ್ಟಿದ್ದಾರೆ.
ಪಟ್ಟಣದಿಂದ ಗ್ರಾಮಕ್ಕೆ ಮರಳುವಾಗ ಈ ಘಟನೆ ಸಂಭವಿಸಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ತಿಳಿಸಲಾಗಿದೆ. ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.