ಕೊಪ್ಪಳ: ಶಿಕ್ಷಣ ಸಮಾಜಕ್ಕೆ ನೀಡಬಹುದಾದ ದೊಡ್ಡ ಕೊಡುಗೆ ಎಂದು ಎಪಿಎಂಸಿ ಸದಸ್ಯ ನಾಗರಾಜ ಚೆಳ್ಳೊಳ್ಳಿ ಹೇಳಿದರು.
ತಾಲ್ಲೂಕಿನ ಗಿಣಿಗೇರಾ ಗ್ರಾಮದಲ್ಲಿ ಈಚೆಗೆ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕೇವಲ ಓದು ಬರಹಕ್ಕೆ ಮಾತ್ರ ಸೀಮಿತವಾದುದಲ್ಲ. ಅದು ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿಯುತ ಕ್ಷೇತ್ರ. ಆಧುನಿಕ ದಿನಗಳಿಗೆ ಅನುಗುಣವಾಗಿ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ವಾರ್ಷಿಕೋತ್ಸವ ಆಯೋಜನೆ ಮಾಡುತ್ತಿರುವುದು ಸ್ವಾಗತಾರ್ಹ. ಇದರಿಂದ ಮಕ್ಕಳ ಸರ್ವತೋಮುಖ ಕಲಿಕೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಗಿಣಿಗೇರಾ ಗ್ರಾಮ ಪಂಚಾಯಿತಿ ಸದಸ್ಯ ಮಾರುತೆಪ್ಪ ಹಲಿಗೇರಿ ಮಾತನಾಡಿ, ಶೈಕ್ಷಣಿಕವಾಗಿ ಮುಂದುವರಿದ ಯಾವುದೇ ವ್ಯಕ್ತಿ ಸಾರ್ವಕಾಲಿಕ ಶ್ರೀಮಂತ ಎಂದರು.
ನಿವೃತ್ತ ಯೋಧ ಶ್ರೀಶೈಲಪ್ಪ ಕುಸ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶಪ್ರೇಮ ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಜೀವನದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ದೇವರಾಜ ಮೇಟಿ ವಾರ್ಷಿಕ ವರದಿ ವಾಚಿಸಿದರು. ಅಂಗವಿಕಲರ ಅಭಿವೃದ್ಧಿ ಇಲಾಖೆಯಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುರೇಶ ಕೆ. ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ನಾಗರಾಜ ಕುರಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ಹನಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಿಂಗರಾಜ ಅಂಗಡಿ ಹಾಗೂ ಲಲಿತಾ ನಿರೂಪಿಸಿದರು.
ವಿದಾರ್ಥಿಗಳಾದ ಹನುಮೇಶ ಮತ್ತು ಸಂಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಿರ್ದೇಶಕ ಸುರೇಶ ಕೆ. ವಂದಿಸಿದರು. ಮುಖಂಡರಾದ ಎಚ್.ಮೋತಿಲಾಲ್, ಮಂಜುನಾಥ ಪಾಟೀಲ್, ರಾಮಣ್ಣ ಚಳ್ಳೊಳ್ಳಿ, ಪಾಂಡುರಂಗ ಹಲಿಗೇರಿ, ಈರಣ್ಣ ಕಾಸನಕಂಡಿ, ಉಮೇಶ ಪೂಜಾರ, ರವಿಕುಮಾರ ಹಲಿಗೇರಿ, ವಿಜಯಕುಮಾರ ಅಗಸಿಮನಿ, ಮುತ್ತಣ್ಣ ಹಿರೇಕಾಸನಕಂಡಿ, ನಾಗರಾಜ ಧರ್ಮಾಪುರ, ಯಂಕಪ್ಪ ಬನ್ನಿಗಿಡದ ಇದ್ದರು.