ಚಿಕ್ಕಮಗಳೂರು: ಸೋರುವುದಷ್ಟೇ ಅಲ್ಲ, ಮೂಗು ತೆರೆಯಲಾರದ ಮಟ್ಟಿಗೆ ಗಬ್ಬು ನಾರುತ್ತಿದೆ ನೋಡಿ ಈ ಬಸ್ ತಂಗುದಾಣ. ಇದು ಹೆಸರಿಗೆ ನಿಲ್ದಾಣ, ವಾಸ್ತವದಲ್ಲಿ ಸಾರ್ವಜನಿಕ ಮೂತ್ರಾಲ ಯವಾಗಿದೆ. ಬಿಸಿಲಿಗೆ ಬಸವಳಿದವರು ಅಥವಾ ಬಸ್ಗಾಗಿ ಕಾಯುತ್ತಾ ಈ ನಿಲ್ದಾಣದಲ್ಲಿ ಕೆಲ ಕಾಲ ನಿಂತವರು ತಲೆ ಸುತ್ತುಬಂದು ವಾಂತಿ ಮಾಡಿ ಕೊಳ್ಳುವುದು ಖಚಿತ!
ಇದು ಯಾವುದೋ ಕುಗ್ರಾಮ ಅಥವಾ ಹಳ್ಳಿಗಾಡಿನಲ್ಲಿರುವ ಬಸ್ ನಿಲ್ದಾ ಣವಲ್ಲ. ನಗರದ ಕೂಗಳತೆ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆ ಗೇರುವ ಹಂತದಲ್ಲಿರುವ, ಚಿಕ್ಕಮಗ ಳೂರು–ಬೇಲೂರು ರಾಜ್ಯ ಹೆದ್ದಾರಿಯ ಕರ್ತೀಕೆರೆ ಬಳಿ ಬಸ್ ನಿಲ್ದಾಣದ ದುಃಸ್ಥಿತಿ.
ದಶಕಗಳ ಹಿಂದೆ ನಿರ್ಮಾಣವಾದ ಈ ನಿಲ್ದಾಣಕ್ಕೆ ಮೊದಲು ಸುಸಜ್ಜಿತ ಮೇಲ್ಚಾವಣಿಯೂ ಇರಲಿಲ್ಲ. ಮೇಲ್ಚಾವಣಿಗೆ ಸೀಟು ಹಾಕಲಾಗಿತ್ತು. ಏಳೆಂಟು ವರ್ಷಗಳ ಹಿಂದೆ ಸೀಟು ತೆಗೆದು ಆರ್ಸಿಸಿ ಹಾಕಲಾಗಿತ್ತು.
ಪಕ್ಕದಲ್ಲಿ ಒಂದು ಮಳಿಗೆ ಮಾಡಿ, ಹೇರ್ ಕಟಿಂಗ್ ಶಾಪ್ ನಡೆಸಲು ಅವಕಾಶ ನೀಡಲಾಗಿತ್ತು. ಹೇರ್ ಕಟಿಂಗ್ ಶಾಪ್ ಮುಚ್ಚಿದ ಮೇಲೆ ಬಾಗಿಲು ನಿಲಗಳನ್ನು ಯಾರೋ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿ ದ್ದಾರೆ. ನಿಲ್ದಾಣ ಮಳೆ ಬಂದಾಗ ಸೋರುತ್ತದೆ. ನೈರ್ಮಲ್ಯವೂ ಹದಗೆಟ್ಟಿದೆ. ಸುತ್ತಲೂ ಬೆಳೆದಿರುವ ಪಾರ್ಥೇನಿಯಂ ಗಿಡಗಂಟಿ ಬೆಳೆದು ಸೊಳ್ಳೆಗಳು ಗುಯ್ಗುಡುತ್ತಾ ಮುತ್ತಿಕ್ಕುತ್ತವೆ.
ನೈರ್ಮಲ್ಯದ ನಿರ್ವಹಣೆಯನ್ನು ಸ್ಥಳೀಯ ಪಂಚಾಯಿತಿಯೂ ನೋಡಿ ಕೊಳ್ಳುತ್ತಿಲ್ಲ. ಇದು ಹೆದ್ದಾರಿಯಲ್ಲಿರುವ ನಿಲ್ದಾಣವಾಗಿದ್ದರೂ ಸಂಬಂಧಿಸಿದ ಇಲಾಖೆಯೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.