ಮಂಗಳೂರು: ‘ಜಗತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿದ್ದರೂ, ನಮ್ಮೊಳಗಿನ ಮಾನವೀಯ ಸಂಬಂಧಗಳು ದೂರವಾಗಬಾರದು. ದೇವರ ಆರಾಧನೆ ಮೂಢನಂಬಿಕೆ ಎಂಬ ಭಾವನೆ ಬಿಟ್ಟು, ಬದುಕಿನ ಅವಿಭಾಜ್ಯ ಅಂಗವೆಂಬ ಪರಿಕಲ್ಪನೆಯೊಂದಿಗೆ ಮುಂದುವರಿಯಬೇಕು’ ಎಂದು ಅದಮಾರು ಮಠಾ ಧೀಶ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಎಕ್ಕೂರು–ಬಜಾಲ್ ರಸ್ತೆಯ ಕಾರ್ನಾಡ್ ಸದಾಶಿವ ನಗರದಲ್ಲಿ ಸುಬ್ರಹ್ಮಣ್ಯ ಮಠದ ಮಂಗಳೂರು ಶಾಖೆಯ ಉದ್ಘಾಟನೆ ಹಾಗೂ ದೇವತಾ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಸದ್ಯದ ಸ್ಥಿತಿಯಲ್ಲಿ ಮನಸ್ಸುಗಳಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ನಮ್ಮೊಳಗಿನ ಸಂಘರ್ಷಣಾ ಶಕ್ತಿಯೇ ಕಾರಣ. ಪ್ರೀತಿಯಿಂದ ಸಮಾಜದಲ್ಲಿ ಬದುಕಿದಾಗ ಮಾತ್ರ ಜೀವನ ಸುಖಕರವಾಗುತ್ತದೆ ಎಂದು ತಿಳಿಸಿದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಧಾರ್ಮಿಕತೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಲ್ಲಲ್ಲಿ ಶಾಖೆಗಳನ್ನು ಮಾಡಲಾಗುತ್ತಿದೆ. ಇಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಮಾಜದ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಖೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಪ್ರತಿಷ್ಠಾ ಹೋಮ, ಪ್ರತಿಷ್ಠಾ ಬ್ರಹ್ಮಕಲಶ, ಭಗವಂತನ ವಿಗ್ರಹ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕೋನಂದೂರು ಗೋಪಾಲ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಜಯರಾಮ್ ಭಟ್, ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಎಂ.ಎಸ್., ಮೂಡುಬಿದಿರೆಯ ಶ್ರೀಪತಿ ಭಟ್, ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಜೋಗಿ, ಶಾರದಾ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ಕರಾವಳಿ ಕಾಲೇಜು ಸಂಸ್ಥೆ ಅಧ್ಯಕ್ಷ ಎಸ್. ಗಣೇಶ್ ರಾವ್, ಪಾಲಿಕೆ ಸದಸ್ಯ ಪ್ರವೀಣ್ಚಂದ್ರ ಆಳ್ವ, ಗಣಪತಿ ಆಚಾರ್ಯ, ವಿಶ್ವ ಹಿಂದೂ ಪರಿಷತ್ನ ಕೃಷ್ಣಮೂರ್ತಿ, ಬಜರಂಗದಳದ ಶರಣ್ ಪಂಪ್ವೆಲ್, ಮಹಾಬಲ ಚೌಟ, ಸುಧಾಕರ್ರಾವ್ ಪೇಜಾವರ, ಅಚ್ಯುತ ಭಟ್ ಬನ್ನಿತ್ತಾಯ ಮತ್ತಿತರರು ಭಾಗವಹಿಸಿದದರು.