ಮಂಡ್ಯ: ಕಾಡನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ಸಂಸದ ಸಿ.ಎಸ್. ಪುಟ್ಟರಾಜು ಸಲಹೆ ನೀಡಿದರು.
ನಗರದ ವಿಠಲ ಭವನದಲ್ಲಿ ವನ್ಯಜೀವಿ ಪತ್ರಿಕೆಯ 10ನೇ ವರ್ಷದ ಸಮಾರಂಭದ ಅಂಗವಾಗಿ ಬುಧವಾರ ನಡೆದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವನ್ಯಜೀವಿಗಳು ಕಾಡಿನಲ್ಲಿ ಆಹಾರ ಸಿಗದೇ ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತವೆ. ಕಾಡು ನಾಶವನ್ನು ನಿಲ್ಲಿಸಿ, ಅವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಕೊಡಬೇಕು. ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸಗಳು ಇತ್ತೀಚೆಗೆ ಹೆಚ್ಚಾಗಿವೆ. ಒಂದು ಯೋಜನೆ ಪೂರ್ಣ ಆಗುವ ಮೊದಲೇ ಅವರಿಗೆ ವರ್ಗಾವಣೆ ಭಾಗ್ಯ ಕೊಡುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾ ರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮಾತನಾಡಿ, ಮೃಗಾಲಯದಲ್ಲಿರುವ ಪ್ರಾಣಿಗಳು ಕಾಡಿನಲ್ಲಿರುವ ಪ್ರಾಣಿ ಗಳಿಗಿಂತ ದೀರ್ಘಾವಧಿ ಕಾಲ ಬದುಕುತ್ತವೆ. ಮೃಗಾಲಯದಲ್ಲಿ ಕೆಲಸ ಮಾಡುವ ನೌಕರರಿಗೆ ವಿಮಾ ಸೇರಿದಂತೆ ಹಲವು ಸೌಲಭ್ಯ ನೀಡಲು ಸರ್ಕಾರ ಚಿಂತನೆ ನೆಡೆಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಾವಿದರಿಗೆ ವಾದ್ಯ ಪರಿಕರ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಿಕೆ ಸಂಪಾದಕಿ ಅಮರಾವತಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಎಫ್ ನಿವೃತ್ತ ಅಧಿಕಾರಿ ಮುನಿಶಿವಣ್ಣ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಬ್ರಮಣ್ಯ ಶೇರೇಗಾರ್, ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ, ಉರಗ ರಕ್ಷಕ ಕೆ.ಎಂ. ಮಹೇಶ್ಕುಮಾರ್, ಬ್ಯಾಂಕ್ ವಿಜಿ ಮತ್ತಿತರರು ಉಪಸ್ಥಿತರಿದ್ದರು.