ಕುಶಾಲನಗರ: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯದ ನೀರನ್ನು ಕಾಲುವೆ ಮೂಲಕ ನೇರವಾಗಿ ನದಿಗೆ ಹರಿಸಲಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಜಿ.ಮನು ನೇತೃತ್ವದಲ್ಲಿ ಪ್ರತಿಭಟಿಸಿದ ಮುಖಂಡರು, ಶೌಚಾಲಯದ ನೀರನ್ನು ನದಿಗೆ ಹರಿಸದಂತೆ ಕ್ರಮ ಕೈಗೊಳ್ಳಬೇಕು. ಅದುವರೆಗೆ ಶೌಚಾಲಯವನ್ನು ಮುಚ್ಚಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಕಾರಣದಿಂದ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ನಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಡಿಕೇರಿ ಘಟಕ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಾವೇರಿ ಹೋರಾಟ ಸಮಿತಿ ಸದಸ್ಯರು ಶೌಚಾಲಯಕ್ಕೆ ಬೀಗ ಹಾಕಿದರು.ಈ ಸಂದರ್ಭ ಬಿಜೆಪಿ ಮುಖಂಡರಾದ ಎಚ್.ಡಿ.ಶಿವಾಜಿ ರಾವ್, ದಿನೇಶ್, ಭಾಸ್ಕರ್ ನಾಯಕ್ ಇತರರು ಇದ್ದರು.
ಪ್ರಯಾಣಿಕರಿಗೆ ತೊಂದರೆ: ಏಕಾಏಕಿ ಬಸ್ ನಿಲ್ದಾಣದ ಶೌಚಾಲಯವನ್ನು ಬಂದ್ ಮಾಡಿದ ಕಾರಣ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ದೂರದ ಊರುಗಳಿಗೆ ದಿನನಿತ್ಯ ಪ್ರಯಾಣ ಬೆಳೆಸುವ ನೂರಾರು ಪ್ರಯಾಣಿಕರು ಸಾರ್ವಜನಿಕ ಸ್ಥಳದಲ್ಲಿಯೇ ಮೂತ್ರವಿರ್ಜನೆ ಮಾಡಿದರು.
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಆದರೆ ಕೆಲವು ವ್ಯಕ್ತಿಗಳು ಶೌಚಾಲಯಕ್ಕೆ ಬೀಗ ಹಾಕಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ ಎಂದು ಪ್ರಯಾಣಿಕ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.