ತುಮಕೂರು: ಬರದ ಕಾರಣ ರೈತರಿಗೆ ನೆರವಾಗಲು ಈ ಹಿಂದೆ ಲೀಟರ್ ಹಾಲಿನ ಖರೀದಿ ಬೆಲೆಯನ್ನು ₹ 2 ಹೆಚ್ಚಿಸಿದ್ದ ತುಮುಲ್ (ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಈಗ ಮತ್ತೆ ತಾತ್ಕಾಲಿಕವಾಗಿ ಲೀಟರ್ಗೆ ₹ 3 ಹೆಚ್ಚಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ಲೀಟರ್ಗೆ ತಲಾ ₹ 1 ಹೆಚ್ಚಳ ಮಾಡಲಾಗಿತ್ತು. ಬರದ ತೀವ್ರತೆ ಹೆಚ್ಚಿರುವ ಕಾರಣ ಮತ್ತೆ ₹ 3 ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಫೆ. 16ರಿಂದ ಹೊಸ ದರ ಜಾರಿಗೆ ಬರಲಿದೆ. ಆದರೆ ಗ್ರಾಹಕರ ಹಾಲಿನ ಮಾರಾಟದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದರು.
ಒಕ್ಕೂಟವು ₹ 27 ಕೋಟಿ ಲಾಭದಲ್ಲಿದೆ. ಲೀಟರ್ಗೆ ಹಾಲು ಖರೀದಿಗೆ ₹ 5 ಹೆಚ್ಚಳದಿಂದ ಮಾರ್ಚ್ ತಿಂಗಳ ಕೊನೆಗೆ ₹ 17 ಕೋಟಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.
ಹಾಲಿನ ಬೆಲೆ ಹೆಚ್ಚಿಸುವಂತೆ ರೈತರು ಕೇಳದಿದ್ದರೂ ಅವರ ಕಷ್ಟ ನೋಡಿ ದರ ಹೆಚ್ಚಿಸಲಾಗಿದೆ. ತುಮುಲ್ ವತಿಯಿಂದ ಗೋಶಾಲೆ ತೆರೆಯಲು ಸಾಧ್ಯವಿಲ್ಲ. ಶೇ 75ರ ಸಬ್ಸಿಡಿ ದರದಲ್ಲಿ ಮೇವು ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಒಕ್ಕೂಟ ನೀಡುವ ₹ 5 ರ ಜತೆಗೆ ಸರ್ಕಾರದ ₹ 5 ಪ್ರೋತ್ಸಾಹ ಧನವೂ ಸಿಗಲಿದೆ ಎಂದು ಹೇಳಿದರು.
ಸರ್ಕಾರದ ಪ್ರೋತ್ಸಾಹ ಧನ ಹೊರತುಪಡಿಸಿ ಕನಿಷ್ಠ 3.4 ಜಿಡ್ಡು, 8.5 ಎಸ್ಎನ್ಎಫ್ ಇರುವ ಹಾಲಿಗೆ ಕನಿಷ್ಠ ₹ 25.84 ಹಾಗೂ ಸರಾಸರಿ 4.1 ಜಿಡ್ಡು ಹಾಗೂ 8.5 ಎಸ್ಎನ್ಎಫ್ ಇರುವ ಹಾಲಿಗೆ ಲೀಟರ್ಗೆ ₹27.16 ಸಿಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರಾದ ಹಳೆಮನೆ ಶಿವನಂಜಪ್ಪ, ಚಂದ್ರಶೇಖರ್, ಚಂದ್ರಶೇಖರ ಗೌಡ, ಪ್ರಕಾರ್, ಕೆ.ಆರ್.ಸುರೇಶ್ ಇದ್ದರು.