ಮನೆಗೆ ಹೆಸರಿಡುವ ಕಷ್ಟ ಅನುಭವಿಸಿದವರಿಗೇ ಗೊತ್ತು. ನಮ್ಮ ತಂದೆ ತೀರ್ಥಹಳ್ಳಿಯ ಬೊಮ್ಮರಸಯ್ಯನ ಅಗ್ರಹಾರದ ಮಹಾಗಣಪತಿಯ ಭಕ್ತರು. ಆದ್ದರಿಂದ ಪದ್ಮನಾಭನಗರದಲ್ಲಿ ಕಟ್ಟಿದ ಮನೆಗೆ ‘ಗರಿಕೆ’ ಎಂಬ ಹೆಸರಿಡಲು ಹೊರಟಿದ್ದರು. ನಂತರ ಅದು ಅಪಭ್ರಂಶವಾಗಿ ‘ಗೊರಕೆ’ ಎಂದಾಗಬಹುದೆಂಬ ಭಯದಿಂದ ಕೈಬಿಟ್ಟರು.
ನಂತರ, ಎಲ್ಲರೂ ಮಾಡುವಂತೆ ಕುಟುಂಬ ಸದಸ್ಯರ ಹೆಸರುಗಳ ಮೊದಲಕ್ಷರವನ್ನೇ ಬಳಸಿಕೊಂಡು ಹೆಸರಿಡಲು ಪ್ರಯತ್ನಿಸಿದರು (ಮು,ರೋ,ಮ,ಮೃ!?). ಆದರೆ ಆ ಅಕ್ಷರಗಳಿಂದ ಅರ್ಥಪೂರ್ಣ ಹೆಸರನ್ನು ರೂಪಿಸಲಾಗಲಿಲ್ಲ.
ನನ್ನ ಅಕ್ಕ ಭೂಮಿ ಹುಣ್ಣಿಮೆಯಂದು ಹುಟ್ಟಿದ ‘ಮಹಿಮಾ’. ಆದ್ದರಿಂದ ‘ಇಳಾ’, ‘ಅವನಿ’, ‘ವಸುಧಾ’, ‘ಭೂಮಿಕಾ’ ಮುಂತಾದವುಗಳನ್ನು ಪ್ರಯತ್ನಿಸಿದರು. ಜೀವನದಲ್ಲಿ ಯಾವಾಗಲೂ ಕೊನೆಯ ಬೆಂಚಿನ ವಿದ್ಯಾರ್ಥಿಯಾಗಿದ್ದ ನಮ್ಮ ತಂದೆ, ತಮ್ಮ ಹಾಗೂ ನಮ್ಮ ತಾಯಿಯ ಹೆಸರುಗಳ (ಮುರಳೀಧರ, ರೋಹಿಣಿ) ಕೊನೆಯ ಅಕ್ಷರಗಳನ್ನು ಬಳಸಿದಾಗ ‘ಧರಣಿ’ ಎಂಬ ಅರ್ಥಪೂರ್ಣ ಹೆಸರು ಹೊರ ಹೊಮ್ಮಿತು.
ನಾನು ಹುಟ್ಟಿದ ನಕ್ಷತ್ರ ‘ಭರಣಿ’ಯು ‘ಧರಣಿ’ಗೆ ಹತ್ತಿರವಾಗುತ್ತದೆ. ಹಾಗೂ ಅಕ್ಕ ಮಹಿಮಾಳ ಹೆಸರು ‘ಧರಣಿ’ಗೆ ಸಮಾನಾರ್ಥಕವೆಂದು ತರ್ಕಿಸಿ ‘ಧರಣಿ’ ಎಂಬ ಹೆಸರನ್ನೇ ಅಂತಿಮಗೊಳಿಸಿದರು. ಭೂಮಿಯಂತೆ ನಮ್ಮ ‘ಧರಣಿ’ಯೂ ನಮ್ಮನ್ನು ಪಾಲಿಸುತ್ತಿದೆ.
-ಮೃದುಲಾ ಟಿ.ಎಂ.