ದೇವರೇ ಗತಿ
ಭೂಪಾಲ್, ಫೆ. 16– ಮಧ್ಯಪ್ರದೇಶ ವಿಧಾನಸಭೆಗೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ತಮ್ಮ ಚುನಾವಣಾ ಯಶಸ್ಸಿಗೆ ದೇವರನ್ನು ನಂಬಿ ಕುಳಿತಿದ್ದಾರೆ.
ಅಭ್ಯರ್ಥಿಗಳು: ಜನಸಂಘದ ಭವಾನಿಶಂಕರ ತಿವಾರಿ ಮತ್ತು ಪಕ್ಷೇತರ ಮುಕುಂದಿ ಲಾಲ್ ಡುಬೆ. ಕ್ಷೇತ್ರ: ದೇನ್ವಾ. ಇವರಲ್ಲದೆ ಈ ಕ್ಷೇತ್ರದಲ್ಲಿ ಇನ್ನೂ ನಾಲ್ವರು ಅಭ್ಯರ್ಥಿಗಳಿದ್ದಾರೆ. ತಿವಾರಿ ಕಳೆದ ಹದಿನೈದು ದಿನದಿಂದ ಮನೆಬಿಟ್ಟು ಕದಲಿಲ್ಲ. ಪಟ್ಟಾಗಿ ಮನೆ ದೇವರ ಮುಂದೆ ಕುಳಿತುಬಿಟ್ಟಿದ್ದಾರೆ. ಆದರೆ ಡುಬೆ ಚುನಾವಣೆಯನ್ನು ತಲೆಗೆ ಹಚ್ಚಿಕೊಳ್ಳದೆ ಕ್ಷೇತ್ರದ ತುಂಬ ಅಡ್ಡಾಡುತ್ತಿದ್ದಾರೆ.
‘ಭಗವಾನ್ ಕೃಷ್ಣನೇ ಚುನಾವಣೆಗೆ ನಿಲ್ಲುವಂತೆ ನನಗೆ ಪ್ರೇರೇಪಿಸಿದ’ ಎಂದು ಪ್ರತಿ ಮತದಾರರಿಗೂ ಅವರು ಹೇಳುತ್ತಾರೆ. ‘ಆದ್ದರಿಂದ ನನ್ನ ಜಯಕ್ಕಾಗಿ ದುಡಿಯುವುದು ಆ ಪರಮಾತ್ಮನ ಕರ್ತವ್ಯ’ ಎಂದು ಮಾತುಗೂಡಿಸುತ್ತಾರೆ.
ದೇನ್ವಾದಲ್ಲಿ ಸೋಮವಾರ ಮತದಾನ. ‘ದೇವರೇ ಗತಿ’ ಎಂದುಕೊಂಡಿರುವ ಇಬ್ಬರೂ ಒಮ್ಮೆಯಾದರೂ ತಮ್ಮ ಹೆಸರು ಹೇಳಿಕೊಂಡು ಪ್ರಚಾರ ಮಾಡಿಲ್ಲ.
***
ಶಾಂತಿಗಾಗಿ ಅಣು ಬಳಕೆ: ಭಾರತ–ರಷ್ಯಾ ಸಹಕಾರ
ಮಾಸ್ಕೋ, ಫೆ. 16– ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಬಳಸಿಕೊಳ್ಳುವ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಣ ಸಹಕಾರದ ಬಗ್ಗೆ ಭಾರತ ಅಣುಶಕ್ತಿ ನಿಯೋಗವು ರಷ್ಯಾ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿದೆ.
ಭಾರತದ ಅಣುಶಕ್ತಿ ಆಯೋಗದ ಅಧ್ಯಕ್ಷ ಡಾ. ವಿಕ್ರಂ ಸಾರಾಭಾಯ್ ಅವರು ನಿಯೋಗದಲ್ಲಿದ್ದಾರೆ.
***
ನಿಜಾಮರು ಹಾಸಿಗೆ ಹಿಡಿದಿದ್ದಾರೆ
ಹೈದರಾಬಾದ್, ಫೆ. 16– ಹೈದರಾಬಾದಿನ ಮಾಜಿ ದೊರೆ 84 ವರ್ಷದ ನಿಜಾಮರು ಹಾಸಿಗೆ ಹಿಡಿದು ಮಲಗಿದ್ದಾರೆ. ಅರಮನೆಯ ಜನ ಕಳವಳಗೊಂಡಿದ್ದಾರೆ. ಅಲ್ಲಿ ಎಂದಿಗಿಂತ ಹೆಚ್ಚು ದೀಪಗಳು ಉರಿಯುತ್ತಿವೆ.