‘ಮಠ’ ಗುರುಪ್ರಸಾದ್ ನಿರ್ದೇಶನದ ‘ಎರಡನೇ ಸಲ...!’ ಚಿತ್ರದ ಎರಡನೇ ಟ್ರೇಲರ್ ಫೆ.15ರಂದು ಬಿಡುಗಡೆಯಾಗಿದೆ. 72 ಸಾವಿರಕ್ಕೂ ಹೆಚ್ಚು ಮಂದಿ ಟ್ರೇಲರ್ ನೋಡಿದ್ದಾರೆ. ಯುಟ್ಯೂಬ್ನಲ್ಲಿಯೇ ‘ಬಿಸಿಬಿಸಿ’ ಚರ್ಚೆಗಳೂ ನಡೆಯುತ್ತಿವೆ.
ಹಸಿಬಿಸಿ ‘ಕಾಫಿ’ ಡೈಲಾಗ್ಗಳಿಂದ ಚಿತ್ರದ ಮೊದಲ ಟ್ರೇಲರ್ ಸುದ್ದಿಯಾಗಿತ್ತು. ಬಿಡುಗಡೆಯಾಗಿರುವ ಎರಡನೇ ಟ್ರೇಲರ್ ಅದರ ಮುಂದುವರಿದ ಭಾಗದಂತಿದೆ.
ದ್ವಂದ್ವಾರ್ಥ– ಭಿನ್ನಾರ್ಥದ ಸಂಭಾಷಣೆ ಜತೆಗೆ ‘ಯಾವ ಸರ್ಕಾರ ಬಂದರೆ ಏನು, ವಾರಕ್ಕೆ ಒಂದು ದಿನ ಅಮ್ಮನಿಗೆ ರಜೆ ಅಂತ ಅನೌನ್ಸ್ ಮಾಡ್ಲಿಲ್ಲ...’ ಎಂಬ ಡೈಲಾಗ್ ಹಲವರ ಗಮನ ಸೆಳೆದಿದೆ.
ಅನೂಪ್ ಸಿಳೀನ್ ಸಂಗೀತ ನಿರ್ದೇಶನವಿದ್ದು, ಅವರೇ ಹಾಡಿರುವ ‘ಪ್ರೇಮ ಕುರುಡೂ, ಪ್ರೇಮಿ ಕುರುಡು ಆಟವೇನೋ ಜೀವ ಎರಡೂ....’ ಹಾಡು ಮತ್ತೆಮತ್ತೆ ಕೇಳುವಂತಿರುವುದು ವಿಶೇಷ.
ಕೂಲಿಂಗ್ಗ್ಲಾಸ್ ಧಾರಿ ಧನಂಜಯ್, ಮುದ್ದಾದ ಮೈಕಟ್ಟಿನ ಸಂಗೀತಾ ಭಟ್ ಅವರದು ಮೂರು ನಿಮಿಷದ ಟ್ರೇಲರ್ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಅಭಿನಯ ಮನ ತಟ್ಟುವಂತಿದೆ. ‘ನಿರ್ದೇಶಕ ಗುರುಪ್ರಸಾದ್ ಸಾಕಷ್ಟು ಸಮಯದ ನಂತರ ಭಿನ್ನ ಪ್ರೇಮ ಕಥೆಯನ್ನು ಹೇಳಲು ಹೊರಟಂತೆ ಇದೆ’ ಎಂಬುದು ಅಭಿಮಾನಿಗಳ ಅಭಿಮಾನ.
‘ಕಾಫಿ’ ಡೈಲಾಗ್ಗೆ ಆಕ್ಷೇಪ
ಲಕ್ಷಾಂತರ ಜನರ ಮೆಚ್ಚಿನ ಪಾನೀಯ ಕಾಫಿಯನ್ನು ಸೆಕ್ಸ್ಗೆ ಹೋಲಿಸಿರುವ ನಿರ್ದೇಶಕರ ಅಭಿರುಚಿಯ ಬಗ್ಗೆ ಹಲವು ಸಿನಿಪ್ರಿಯರು ತಕರಾರು ತೆಗೆದಿದ್ದಾರೆ. ಎರಡನೇ ಟ್ರೇಲರ್ನಲ್ಲಿ ಟೀ ಬಗ್ಗೆಯೂ ಪ್ರಸ್ತಾಪವಾಗಿರುವುದು ಹಲವರ ಕಣ್ಣು ಕೆಂಪೇರುವಂತೆ ಮಾಡಿದೆ. ನಟರಾಜ್ ಎಂಬುವವರು ‘ಕಾಫಿ ಮರ್ಯಾದೆ ತಗುದ್ ಬುಟ್ಟಲ್ಲೋ ಮಾರಾಯ, ಈಗ ಟೀ ಗೂ ನಿನ್ ಗಡ್ಡದ ಮೇಲಿನ ಕಣ್ ಬಿತ್ತಾ...!’ ಎಂದು ಛೇಡಿಸಿದ್ದಾರೆ.