ನವದೆಹಲಿ: ಕರ್ನಾಟಕದ ಎಸ್. ಅಬ್ದುಲ್ ನಜೀರ್ ಮತ್ತು ಮೋಹನ ಎಂ. ಶಾಂತನಗೌಡರ ಸೇರಿದಂತೆ ಐವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ಇದರಿಂದ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಹೆಚ್ಚಿದೆ. ನಜೀರ್ ಮತ್ತು ಶಾಂತನ ಗೌಡರ ಅಲ್ಲದೆ ಸಂಜಯ್ ಕಿಶನ್ ಕೌಲ್, ನವೀನ್ ಸಿನ್ಹಾ ಮತ್ತು ದೀಪಕ್ ಗುಪ್ತಾ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಪ್ರಮಾಣವಚನ ಬೋಧಿಸಿದರು.
ನಜೀರ್ ಅವರು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಮತ್ತು ಶಾಂತನಗೌಡರ ಅವರು ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೌಲ್, ಸಿನ್ಹಾ ಮತ್ತು ಗುಪ್ತಾ ಅವರು ಕ್ರಮವಾಗಿ ಮದ್ರಾಸ್ ಹೈಕೋರ್ಟ್, ರಾಜಸ್ತಾನ ಹೈಕೋರ್ಟ್ ಹಾಗೂ ಛತ್ತೀಸ್ಗಡ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್ ಹಾಗೂ ಪ್ರಫುಲ್ಲ ಚಂದ್ರ ಪಂತ್ ಅವರು ಈ ವರ್ಷ ನಿವೃತ್ತಿ ಹೊಂದಲಿದ್ದಾರೆ.