ನವದೆಹಲಿ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸಂಬಂಧಿಸಿದ ಹಗರಣದ ಬಗ್ಗೆ ನಡೆಯುತ್ತಿದ್ದ ಲೋಕಾಯುಕ್ತ ತನಿಖೆ ರದ್ದು ಮಾಡಿದ ರಾಜ್ಯ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿರುವ ಮನವಿ ಆಧರಿಸಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೆ ಆದೇಶಿಸಿದೆ.
ನಾಯ್ಡು ಅವರು ರಾಜ್ಯದ ಕೈಗಾರಿಕಾ ಸಚಿವ ಆಗಿದ್ದ ಅವಧಿಯಲ್ಲಿ ನಡೆದ ₹ 360 ಕೋಟಿ ಮೊತ್ತದ ಹಗರಣ ಇದು. ನಾಯ್ಡು ಮತ್ತು ಅವರ ಪುತ್ರ ಕಟ್ಟಾ ಜಗದೀಶ್ ಅವರು ಕೆಲವು ರೈತರಿಗೆ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಅಕ್ರಮವಾಗಿ ಲಾಭ ಮಾಡಿಕೊಂಡಿರುವುದು, ಜಮೀನನ್ನು ನಿಯಮ ಮೀರಿ ಹಂಚಿಕೆ ಮಾಡಿರುವುದು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಬೇರೆ ಬೇರೆ ವ್ಯಕ್ತಿಗಳ ಮೇಲೆ ಅನಗತ್ಯವಾಗಿ ಪ್ರಭಾವ ಬೀರಿದ ಆರೋಪ ನಾಯ್ಡು ಮೇಲಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಆರ್.ಎಫ್. ನಾರಿಮನ್ ಅವರ ಪೀಠ ನಡೆಸುತ್ತಿದೆ.