ಬೆಂಗಳೂರು: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ₹35 ಲಕ್ಷ ಮೊತ್ತವನ್ನು ಠೇವಣಿ ಇರಿಸುವಂತೆ ಮುಜರಾಯಿ ಇಲಾಖೆಯ ಆಯುಕ್ತ ಎಸ್.ಪಿ.ಷಡಕ್ಷರಿ ಸ್ವಾಮಿ ಅವರಿಗೆ ಹೈಕೋರ್ಟ್ ಆದೇಶಿಸಿದೆ.
‘ನಮಗೆ 5ನೇ ಮತ್ತು 6ನೇ ವೇತನ ಆಯೋಗದ ಅನ್ವಯ ಸಂಬಳ ನೀಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದ್ದರೂ ಇದನ್ನು ಪಾಲನೆ ಮಾಡಿಲ್ಲ’ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 23 ನೌಕರರು ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ಮುಜರಾಯಿ ಇಲಾಖೆಯ ಆಯುಕ್ತ ಎಸ್.ಪಿ. ಷಡಕ್ಷರಿ ಸ್ವಾಮಿ, ಮುಜರಾಯಿ ಇಲಾಖೆ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ನಿಂಗಯ್ಯ ವಿರುದ್ಧ ದೇವಸ್ಥಾನದ ನೌಕರರರಾದ ದೇವಕಿ, ಕೆ.ಎಸ್.ಸುಮತಿ ಮತ್ತು ಇತರೆ 21 ನೌಕರರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಜಯಂತ ಪಟೇಲ್ ಹಾಗೂ ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
‘ದೇವಕಿ ಅವರ ಅರ್ಜಿಗೆ ಸಂಬಂಧಿಸಿದಂತೆ ₹2 ಲಕ್ಷ ಹಾಗೂ ಕೆ.ಎಸ್.ಸುಮತಿ ಸೇರಿದಂತೆ ಇತರೆ 21 ಜನರ ಅರ್ಜಿಗೆ ಸಂಬಂಧಿಸಿದಂತೆ ಒಟ್ಟು ₹ 33 ಲಕ್ಷವನ್ನು ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾರ್ಚ್ 7ರ ಒಳಗೆ ಠೇವಣಿ ಇರಿಸಬೇಕು. ಇಲ್ಲವೇ ಆಯುಕ್ತ ಷಡಕ್ಷರಿ ಸ್ವಾಮಿ ಅವರೇ ಖುದ್ದಾಗಿ ಕೋರ್ಟ್ಗೆ ಹಾಜರಾಗಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಅರ್ಜಿದಾರರು ದೇವಾಲಯದ ಪಾಕಶಾಲೆ, ಕಂಪ್ಯೂಟರ್ ವಿಭಾಗ, ತೋಟ, ಯಾಗಶಾಲೆ, ಉಗ್ರಾಣ, ಶುಚಿತ್ವ ವಿಭಾಗ, ದೊಂದಿ ಹಿಡಿಯುವುದು ಹಾಗೂ ರಥ ಕಟ್ಟುವ ವಿಭಾಗಗಳಲ್ಲಿ ನೌಕರರಾಗಿದ್ದಾರೆ.
ಸರ್ಕಾರದ ಪರ ಇ.ಎಸ್.ಇಂದಿರೇಶ್ ಹಾಗೂ ಅರ್ಜಿದಾರರ ಪರ ವಕೀಲ ಎಚ್.ಪವನಚಂದ್ರಶೆಟ್ಟಿ ಹಾಜರಿದ್ದರು. ಪ್ರಕರಣವನ್ನು ಮಾರ್ಚ್ 7ಕ್ಕೆ ಮುಂದೂಡಲಾಗಿದೆ.