ಬೆಂಗಳೂರು: ಕಲಾ ನಿರ್ದೇಶಕ ಹಾಗೂ ನಟ ಅರುಣ್ ಸಾಗರ್ ಅವರಿಗೆ ಸೇರಿದ ಗೋದಾಮಿಗೆ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಹಾಗೂ ವೇದಿಕೆಯ ಪರಿಕರಗಳು ಭಸ್ಮವಾಗಿವೆ.
ಉತ್ತರಹಳ್ಳಿ ಕೆರೆ ಸಮೀಪ 1.15 ಎಕರೆ ಜಾಗದಲ್ಲಿ ಸುತ್ತಲೂ ಶೆಡ್ಗಳನ್ನು ಹಾಕಿ ಬೃಹತ್ ಗೋದಾಮು ನಿರ್ಮಿಸಲಾಗಿದೆ. ಸಿನಿಮಾ ಚಿತ್ರೀಕರಣದ ವೇಳೆ ಬಳಸಲಾಗುವ ವಿವಿಧ ವಿನ್ಯಾಸಗಳ ಕಲಾಕೃತಿಗಳನ್ನು ಅಲ್ಲಿ ಸಂಗ್ರಹಿಸಿಡಲಾಗಿತ್ತು. ಅಲ್ಲದೆ, ಸಭೆ–ಸಮಾರಂಭಗಳಿಗೆ ವೇದಿಕೆ ನಿರ್ಮಿಸಲು ಬೇಕಾಗುವ ಪರಿಕರಗಳನ್ನೂ ಅಲ್ಲಿಡಲಾಗಿತ್ತು.
ಬುಧವಾರ ಸಂಜೆ ಆರು ಗಂಟೆ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ಒಳಗಿದ್ದ ಮೂವರು ಕಾರ್ಮಿಕರು, ಕೂಡಲೇ ಹೊರಗೆ ಓಡಿ ಬಂದಿದ್ದಾರೆ. ಕೂಡಲೇ ಏಳು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
‘ಗೋದಾಮಿನ ಸುತ್ತಲೂ ತ್ಯಾಜ್ಯ ಸುರಿಯಲಾಗುತ್ತಿತ್ತು. ಅದಕ್ಕೆ ಹೊತ್ತಿಕೊಂಡ ಬೆಂಕಿ, ಗೋದಾಮಿಗೂ ವ್ಯಾಪಿಸಿರಬಹುದು. ಘಟನೆ ಸಂಬಂಧ ಅರುಣ್ಸಾಗರ್ ಹಾಗೂ ಗೋದಾಮಿನ ವ್ಯವಸ್ಥಾಪಕ ರಾಕೇಶ್ ಅವರು ಸುಬ್ರಹ್ಮಣ್ಯಪುರ ಠಾಣೆಗೆ ದೂರು ಕೊಟ್ಟಿದ್ದಾರೆ. ಆಹುತಿಯಾದ ವಸ್ತುಗಳ ಮೌಲ್ಯದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ’ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.