ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡಿ ಘನತೆಗೆ ಧಕ್ಕೆ ತಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್ನ ಮುಖ್ಯ ಸಚೇತಕ ಐವಾನ್ ಡಿಸೋಜ ಅವರು ಮಲ್ಲೇಶ್ವರ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ.
‘ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂಬ ಆರೋ ಪದ ಹಿಂದೆ ಯಡಿಯೂರಪ್ಪ ಮತ್ತು ಅನಂತ್ಕುಮಾರ್ ಅವರ ಷಡ್ಯಂತ್ರವಿದೆ. ಈ ಬಗ್ಗೆ ಅವರಿಬ್ಬರು ನಡೆಸಿದ ಸಂಭಾಷಣೆಯ ಸಿ.ಡಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ’.
‘ಆ ಸಿ.ಡಿಯನ್ನೇ ಸಾಕ್ಷಿಯನ್ನಾಗಿ ಪರಿ ಗಣಿಸಿ, ಸೂಕ್ತ ತನಿಖೆ ನಡೆಸಿ ಅವರಿಬ್ಬರನ್ನು ಬಂಧಿಸಬೇಕು’ ಎಂದು ದೂರಿನಲ್ಲಿ ಡಿಸೋಜ ಒತ್ತಾಯಿಸಿದ್ದಾರೆ.
‘ಪ್ರಕರಣವೂ ಭ್ರಷ್ಟಾಚಾರ ನಿಗ್ರಹ ದಳದ ವ್ಯಾಪ್ತಿಗೆ ಬರುತ್ತದೆ. ಸದ್ಯಕ್ಕೆ ಡಿಸೋಜ ಅವರು ನೀಡಿರುವ ದೂರನ್ನು ಸ್ವೀಕರಿಸಿದ್ದೇವೆ. ಈ ದೂರಿನಡಿ ಎಫ್ಐಆರ್ ದಾಖಲಿಸಿಕೊಳ್ಳುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.