ಬೆಂಗಳೂರು: ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪ್ರಾಂಶುಪಾಲ ಕುಮಾರ್ ಠಾಕೂರ್ ಅವರನ್ನು ಕೇಂದ್ರೀಯ ವಿದ್ಯಾಲಯದ ಸಂಘಟನೆ (ಕೆವಿಎಸ್) ಅಮಾನತುಗೊಳಿಸಿದೆ.
‘ಪ್ರಾಥಮಿಕ ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾದ ಕಾರಣ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಲಾಗುವುದು’ ಎಂದು ಕೆವಿಎಸ್ ತಿಳಿಸಿದೆ.
ಆರೋಪ ಎದುರಿಸುತ್ತಿರುವ ಪ್ರಾಂಶುಪಾಲರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಕೇಂದ್ರೀಯ ವಿದ್ಯಾಲಯಗಳ ಆಯುಕ್ತರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್ಸಿಪಿಸಿಆರ್) ಈ ಹಿಂದೆ ಪತ್ರ ಬರೆದಿತ್ತು. ಈ ಪ್ರಕರಣ ಸಂಬಂಧ ಕೆವಿಎಸ್ಗೆ ಆಯೋಗ ನೋಟಿಸ್ ನೀಡಿತ್ತು.
ಕೆವಿಎಸ್ ಆಯುಕ್ತರ ಪರವಾಗಿ ಬೆಂಗಳೂರು ವಿಭಾಗದ ಉಪ ಆಯುಕ್ತ ಪಿ. ದೇವಕುಮಾರ್ ಅವರು ಶುಕ್ರವಾರ ವಿಚಾರಣೆಗೆ ಹಾಜರಾದರು. ಪ್ರಕರಣ ಸಂಬಂಧ ಇದುವರೆಗೂ ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡಿದರು.
‘ದೇವಕುಮಾರ್ ಅವರ ವಿವರಣೆ ತೃಪ್ತಿ ನೀಡಿಲ್ಲ. ಕೆವಿಎಸ್ ಆಯುಕ್ತರು ಫೆ.25ಕ್ಕೆ ಆಯೋಗದ ಎದುರು ಹಾಜರಾಗಬೇಕು’ ಎಂದು ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಸೂಚಿಸಿದರು.