ಜೇವರ್ಗಿ: ಮಹಾತಪಸ್ವಿ ಸಂತ ಸೇವಾ ಲಾಲ ಮಹಾರಾಜರ ಆಚಾರ ವಿಚಾರಗಳು ಕೇವಲ ಬಂಜಾರ ಸಮು ದಾಯಕ್ಕೆ ಸೀಮಿತವಾಗಿರದೆ ಮನು ಕುಲದ ಉದ್ಧಾರದ ಸದಾಶಯ ಒಳಗೊಂಡಿದೆ. ವಿಶಾಲ ಮನೋ ಭಾವದಿಂದ ಕೂಡಿದ ಸೇವಾಲಾಲ ಮಹಾರಾಜರ ಸಂದೇಶ ಇಂದಿಗೂ ಪ್ರಸ್ತುತ ಎಂದು ಸಿಂದಗಿ ತಾಲ್ಲೂಕಿನ ಕೆಸರಟಗಿಯ ಶಂಕರಲಿಂಗ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಹೇಳಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬಂಜಾರ ಸಮಾಜ ತಾಲ್ಲೂಕು ಘಟಕದ ವತಿಯಿಂದ ನಡೆದ ಸಂತ ಸೇವಾಲಾಲ ಮಹಾರಾಜರ 278ನೇ ಜಯಂತ್ಯುತ್ಸವ ಹಾಗೂ ಬಂಜಾರ ಸಮುದಾಯದ ಜನಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬಂಜಾರ ಸಮಾಜಕ್ಕೆ ಇತಿಹಾಸ ಬರೆದವರು ಸೇವಾಲಾಲ ಮಹಾ ರಾಜರು. 7 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬಂಜಾರ ಸಮಾಜದ ಜನತೆ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂತ ಸೇವಾಲಾಲ ಮಹಾ ರಾಜರ ಜಯಂತಿಯನ್ನು ರಾಜ್ಯ ಸರ್ಕಾರ ದಿಂದ ಆಚರಿಸಬೇಕು ಎಂದು ಸೋಮ ಲಿಂಗ ಸ್ವಾಮೀಜಿ ಒತ್ತಾಯಿಸಿದರು.
ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಬಂಜಾರಾ ಸಮುದಾಯದ ಧರ್ಮಗುರು ಸೇವಾಲಾಲ ಮಹಾರಾಜರ ತತ್ವಾದರ್ಶ ಇಂದಿಗೂ ಸಮಾಜಕ್ಕೆ ದಾರಿದೀಪ. ಬಂಜಾರ ಸಮಾಜದ ಜನರು ಸಂಘಟಿತರಾಗುವ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಪಟ್ಟಣದಲ್ಲಿ ಸಂತ ಸೇವಾಲಾಲ ಭವನ ನಿರ್ಮಿಸಲು ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ₹1.5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಗಿರೀಶ ರಾಠೋಡ ಅವರು ‘ಸೇವಾಲಾಲ ಮಹಾರಾಜರ ಜೀವನ ಸಾಧನೆ’ ಕುರಿತು ಉಪನ್ಯಾಸ ನೀಡಿದರು.ಗೊಬ್ಬುರವಾಡಿಯ ಬಳಿರಾಮ ಮಹಾರಾಜ, ಮುಗುಳ ನಾಗಾಂವ್ ಜೇಮಸಿಂಗ್ ಮಹಾರಾಜ, ಲಿಂಗ ಸೂರಿನ ಸಿದ್ಧಲಿಂಗ ಮಹಾ ರಾಜರು, ಚೌಡಾಪುರದ ಮುರಹರಿ ಮಹಾ ರಾಜರು ಸಾನಿಧ್ಯ ವಹಿಸಿದ್ದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ್, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಬಂಜಾರಾ ಸಮಾಜದ ಮುಖಂಡ ಸುಭಾಷ ರಾಠೋಡ, ಮುಖಂಡ ಅಶೋಕ ಸಾಹು ಗೋಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವಕ್ಕೆಮ್ಮ ಚನಮಲ್ಲಯ್ಯ ಹಿರೇಮಠ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶಾಂತಪ್ಪ ಕೂಡಲಗಿ ಇದ್ದರು.
ಸೇವಾಲಾಲ ಜಯಂತ್ಯುತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪ್ರಭು ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ತುಕಾರಾಮ ಚವ್ಹಾಣ,ಉಪಾಧ್ಯಕ್ಷ ಬಹಾದ್ದೂರ್ ರಾಠೋಡ್, ಪ್ರಧಾನ ಕಾರ್ಯದರ್ಶಿ ತುಳಜಾರಾಮ ರಾಠೋಡ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾಬಾಯಿ ರಾಠೋಡ್, ಧನರಾಜ್ ರಾಠೋಡ್, ಲಕ್ಷ್ಮಣ ಪವಾರ್ ಮಾವನೂರ, ಉಮಾಜಿ ರಾಠೋಡ್, ತಿರುಪತಿ ರಾಠೋಡ್. ರಾಮು ಚವ್ಹಾಣ, ಚಂದ್ರಶೇಖರ ರಾಠೋಡ್, ಲಕ್ಷ್ಮಣ ರಾಠೋಡ, ಶ್ರೀಶೈಲ ರಾಠೋಡ್ ಇದ್ದರು. ಬಹದ್ದೂರ್ ರಾಠೋಡ್ ಸ್ವಾಗತಿಸಿದರು. ತುಳಜಾರಾಮ ರಾಠೋಡ್ ನಿರೂಪಿಸಿದರು. ಲಾಲಪ್ಪ ನಾಯಕ್ ವಂದಿಸಿದರು.
ಬೃಹತ್ ಮೆರವಣಿಗೆ, ಸಂಭ್ರಮಾಚರಣೆ
ಜೇವರ್ಗಿ: ಸಂತ ಸೇವಾಲಾಲ ಮಹಾರಾಜರ 278ನೇ ಜಯಂತ್ಯು ತ್ಸವ ಹಾಗೂ ಬಂಜಾರ ಸಮಾಜದ ಜನಜಾಗೃತಿ ಸಭೆ ನಿಮಿತ್ತ ತಾಲ್ಲೂಕು ಬಂಜಾರ ಸಮಾಜದ ವತಿಯಿಂದ ಶುಕ್ರವಾರ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ನಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದವರೆಗೆ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.
ಬಂಜಾರಾ ಸಮಾಜದ ಮಹಿಳೆಯರು ತಲೆ ಮೇಲೆ ಕುಂಭ ಹೊತ್ತು ಮೆರವಣಿಗೆಯುದ್ದಕ್ಕೂ ಸಾಗಿದರು. ವಿವಿಧ ವಾದ್ಯ ವೈಭವಗಳು, ಕಲಾ ತಂಡಗಳು ಮೆರವಣಿಗೆ ಸೊಬಗನ್ನು ಇಮ್ಮಡಿಗೊಳಿಸಿದವು. ಯುವತಿಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಮತ್ತು ಆಧುನಿಕ ದಿರಿಸಿನಲ್ಲಿ ನೃತ್ಯ ಪ್ರದರ್ಶಿಸಿದರು. ಸೇವಾಲಾಲ ಮಹಾರಾಜರ ಭಾವಚಿತ್ರದ ವೈಭವದ ಮೆರವಣಿಗೆಯಲ್ಲಿ ಬಂಜಾರ ಸಮಾಜದ ಸಂಸ್ಕೃತಿ ಅನಾವರಣದ ಜತೆಗೆ ಸಮುದಾಯದ ಶಕ್ತಿ ಪ್ರದರ್ಶನ ನಡೆಯಿತು.
* ಸೇವಾಲಾಲ ಮಹಾರಾಜರ ರೂಪದಲ್ಲಿ ಮಾನವ ಜನಾಂಗಕ್ಕೆ ದರ್ಶನಾಶೀರ್ವಾದ ನೀಡುತ್ತಿರುವ ರಾಮರಾವ್ ಮಹಾರಾಜರ ಆದರ್ಶ ನಾವೆಲ್ಲರೂ ಪಾಲಿಸಬೇಕು.
ಡಾ. ಅಜಯ ಸಿಂಗ್, ಶಾಸಕ