ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಸ್ಮಾರಕ ಉದ್ಯಾನ ನಿರ್ಮಾಣ ಯೋಜನೆ

ಕೊಹಿನೂರ ವಜ್ರ ಸಿಕ್ಕ ಕೊಳ್ಳೂರ ಬಳಿ ಮೀಸಲಿಟ್ಟ ಭೂಮಿಯಲ್ಲಿ ಬೆಳೆದಿರುವ ದಟ್ಟಜಾಲಿ
Last Updated 18 ಫೆಬ್ರುವರಿ 2017, 6:28 IST
ಅಕ್ಷರ ಗಾತ್ರ
ಯಾದಗಿರಿ: ವಿಶ್ವವಿಖ್ಯಾತ ಕೊಹಿನೂರ ವಜ್ರ ದೊರೆತ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರು ವಜ್ರ ಗಣಿಗಾರಿಕೆ ಸ್ಥಳದಲ್ಲಿ ಉದ್ಯಾನ ನಿರ್ಮಾಣಗೊಳಿಸಿ ಸ್ಮಾರಕ ರೀತಿಯ ಪ್ರವಾಸಿ ತಾಣ ನಿರ್ಮಾಣ ಯೋಜನೆಗೆ ಜಿಲ್ಲಾಡಳಿತವೇ ನಿರ್ಲಕ್ಷ್ಯ ತೋರಿದೆ.
 
ಕಳೆದ ಜೂನ್‌ ತಿಂಗಳಿನಲ್ಲಿ ಕಂದಾಯ ಮತ್ತು ಭೂಮಾಪನ ಅಧಿಕಾರಿಗಳು ಕೊಳ್ಳೂರ (ಎಂ) ಬಳಿ ಸರ್ವೆ ಕಾರ್ಯ ನಡೆಸಿ 8 ಎಕರೆ 19 ಗುಂಟೆ ಭೂಮಿ ಗುರುತಿಸಿದ್ದರು. ಆಗಿನ ಜಿಲ್ಲಾಧಿಕಾರಿ ಮನೋಜ್‌ ಕುಮಾರ್‌ ಜೈನ್‌ ವಿಶೇಷ ಆಸಕ್ತಿ ವಹಿಸಿದ್ದರಿಂದ ಪ್ರವಾಸಿ ತಾಣ ನಿರ್ಮಾಣ ಕಾರ್ಯ ಚಟುವಟಿಕೆಗಳು ಚುರುಕಿನಿಂದ ನಡೆದಿದ್ದವು.
 
 ಸರ್ವೆ ನಂ.337, 342ರಲ್ಲಿ ಕಂದಾಯಭೂಮಿ ಗುರುತಿಸಿ ಪ್ರತ್ಯೇಕ ಪಹಣಿಯನ್ನು ಸಿದ್ಧಗೊಳಿಸಲಾಗಿತ್ತು. ಪಹಣಿಯಲ್ಲಿ ‘ವಿಶ್ವಪ್ರಸಿದ್ಧ ಕೊಹಿನೂರು ವಜ್ರ ಸಿಕ್ಕ ಸ್ಥಳ ಪ್ರವಾಸೋದ್ಯಮ ಪ್ರವಾಸಿ ತಾಣಕ್ಕೆ ಕಾಯ್ದಿರಿಸಿದ ಸ್ಥಳ’ ಎಂಬುದಾಗಿ ನಮೂದಿಸಲಾಗಿದೆ. ಆದರೆ, ಆಗಿನ ಜಿಲ್ಲಾಧಿಕಾರಿಯ ದಿಢೀರ್‌ ವರ್ಗಾವಣೆಗೊಂಡ ಮೇಲೆ ಈ ಕಾರ್ಯ ನನೆಗುದಿಗೆ ಬಿದ್ದಿದೆ.
 
ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಹಿಂದಿನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕೊಹಿನೂರ ವಜ್ರ ಪ್ರವಾಸಿ ಉದ್ಯಾನ ತಾಣ ಯೋಜನೆ ಸಾಕಾರದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರಿಂದ ಯೋಜನೆಗೆ ಚಾಲನೆ ನೀಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವರ ವರ್ಗಾವಣೆಯ ನಂತರ ಪುನಃ ಈ ಯೋಜನೆಗೆ ಹಿಡಿದ ಗ್ರಹಣ ಮಾತ್ರ ಇನ್ನೂ ಬಿಟ್ಟಿಲ್ಲ. 
 
ಈಗಿನ ಜಿಲ್ಲಾಧಿಕಾರಿಯವರಿಗೆ ಕೊಳ್ಳೂರ ಗಣಿ ಪ್ರದೇಶದ ಮಹತ್ವ ತಿಳಿಸಿ ಯೋಜನೆಗೆ ಚಾಲನೆ ನೀಡುವಂತೆ ಅನೇಕ ಬಾರಿ ಕೊಳ್ಳೂರು ಮನವಿ ಮಾಡಿದ್ದರೂ, ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್‌ ಚೌಧರಿ ಗಮನ ಹರಿಸಿಲ್ಲ ಎಂಬುದಾಗಿ ಕೊಳ್ಳೂರ ಗ್ರಾಮದ ಮುಖಂಡ ಬಸವರಾಜಪ್ಪ ದೂರುತ್ತಾರೆ.
ಕೊಹಿನೂರು ವಜ್ರ ಸಿಕ್ಕ ಸ್ಥಳದ ಬಗ್ಗೆ ಅನೇಕ ಅಭಿಪ್ರಾಯಗಳು ಚಾಲ್ತಿಯಲ್ಲಿದ್ದವು. ಕೊಹಿನೂರ ವಜ್ರ ನಮ್ಮದು ಎಂಬುದಾಗಿ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ರಿಟ್‌ ಸಲ್ಲಿಸಿತ್ತು. ಆದರೆ, ಅಧಿಕೃತ  ಪೂರಕ ದಾಖಲೆಯನ್ನು ಶಹಾಪುರದ ಭೀಮರಾಯನ ಗುಡಿ ಸಂಶೋಧನಾ ಕೇಂದ್ರ ಒದಗಿಸಿದ ಮೇಲೆ ಆಂಧ್ರ ತೆಪ್ಪಗಾಗಿದೆ.
 
ಇತಿಹಾಸ ಹಿನ್ನೆಲೆ: 1656ರಲ್ಲಿ ವಜ್ರದ ಗಣಿ ಮಾಲೀಕ ಮೀರ್‌ ಜುಮುಲಾನಿಗೆ ಕೊಹಿನೂರ ವಜ್ರ ಸಿಕ್ಕಿತು. ಆ ವಜ್ರವನ್ನು ತೂಕ ಮಾಡಿ ನೋಡಿದಾಗ ಅದು 756 ಕ್ಯಾರೇಟ್ ಇತ್ತು! ಈ ಅಪರೂಪದ ವಜ್ರವನ್ನು ಅವನು ಗೋಲ್ಕೊಂಡಾದ ಸುಲ್ತಾನನಿಗೆ ಒಪ್ಪಿಸಿದ. ಗೋಲ್ಕೊಂಡಾದ ಸುಲ್ತಾನ ದಿಲ್ಲಿಯ ದೊರೆ ಶಹಜಹಾನನಿಗೆ ಈ ವಜ್ರವನ್ನು ಕಾಣಿಕೆಯಾಗಿ ನೀಡಿದ ಎಂಬುದಾಗಿ ಇತಿಹಾಸ ಹೇಳುತ್ತದೆ. ಅಷ್ಟೇ ಅಲ್ಲದೇ ಪ್ರಸಿದ್ಧ ವಜ್ರ ಪರೀಕ್ಷಣಕಾರರಾದ ಡಾ.ಬಾರ್ಲೆ ಕೂಡ  ಈ ವಜ್ರ ಕೃಷ್ಣನದಿ ತಟದ ಕೊಳ್ಳೂರ ಗಣಿಯಲ್ಲಿ ಸಿಕ್ಕಿದ್ದು ಎಂಬುದಾಗಿ ತನ್ನ ಪುಸ್ತಕ ‘ಫಾರ್‌ಗೆಟನ್‌ ಎಂಪೇರ್’ನಲ್ಲಿ ಉಲ್ಲೇಖಿಸಿದ್ದಾರೆ.
 
ಅಲ್ಲದೇ 1656 ವಿಜಯನಗರ ಸಾಮ್ರಾಜ್ಯದ ಉತ್ತುಂಗದ ಕಾಲ. ಭಾರತದಲ್ಲಿ ದಕ್ಷಿಣ ಪಥೇಶ್ವರ ಎಂದೇ ಖ್ಯಾತನಾಮನಾಗಿದ್ದ ಶ್ರೀಕೃಷ್ಣದೇವರಾಯನ ಆಳ್ವಿಕೆ ಅವಧಿ. ವಜ್ರವೈಡೂರ್‍ಯಗಳನ್ನು ಬಳ್ಳಗಳಲ್ಲಿ ಅಳೆಯುತ್ತಿದ್ದ ಕಾಲ. ಅನಂತಪುರ, ವಜ್ರಕೇರೂರ, ಕೊಳ್ಳೂರ, ಗೋಲ್ಕೊಂಡಾಗಳಲ್ಲಿ ವಜ್ರ ಗಣಿಗಾರಿಕೆ ಇತ್ತು. ವಿಜಯನಗರದ ಸಂಪತ್ತಿಗೆ ಇವು ಕಾರಣವಾಗಿದ್ದವು ಎಂಬುದಾಗಿ ಇತಿಹಾಸದಿಂದ ತಿಳಿದು ಬರುತ್ತದೆ.
 
1739ರಲ್ಲಿ ನಾದಿರ್‌ ಷಾ ದಿಲ್ಲಿಯ ಮೇಲೆ ದಾಳಿ ಮಾಡಿ ಅಪಾರ ಸಂಪತ್ತು ಲೂಟಿ ಮಾಡುತ್ತಾನೆ. ಆಗ ವಜ್ರ ನಾದಿರ್‌ ಷಾ ಕೈಸೇರುತ್ತದೆ. ಅದನ್ನು ನೋಡಿದ ದಪರೆ ಷಾ ‘ಕೊಹಿನೂರ’ (ಬೆಳಕಿನ ಬೆಟ್ಟ) ಎಂಬುದಾಗಿ ಉದ್ಗಾರ ತೆಗೆಯುತ್ತಾನೆ. ಅಂದಿನಿಂದ ವಜ್ರಕ್ಕೆ ‘ಕೊಹಿನೂರ’ ಎಂಬುದಾಗಿ ನಾಮಕಾರಣವಾಗಿದೆ.
 
1813ರಲ್ಲಿ ಲಾಹೋರ್‌ ದೊರೆ ರಣಜೀತ್‌ ಸಿಂಗ್‌ಗೆ ಇದು ಕಾಣಿಕೆಯಾಗಿ ದೊರೆಯುತ್ತದೆ.1849ರಲ್ಲಿ ಬ್ರಿಟಿಷ್‌ ಅಧಿಕಾರಿ ಸರ್‌ ಜಾನ್‌ ಲಾರೆನ್ಸ್ ಪಂಜಾಬ್‌ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಕೊಹಿನೂರ ವಜ್ರ ಅವನ ಮೂಲಕ ಇಂಗ್ಲೆಂಡಿನ ರಾಣಿಗೆ ತಲುಪುತ್ತದೆ. ಇಂಗ್ಲೆಂಡಿನ ರಾಜವಂಶಸ್ಥರ ಕಿರೀಟದಲ್ಲಿ ಯಾದಗಿರಿ ಜಿಲ್ಲೆಯ ಅಪೂರ್ವ ವಜ್ರ ಈಗಲೂ ಮೆರೆಯುತ್ತಿದೆ.
 
ಅಲೆದು ಚಪ್ಪಲಿಗಳು ಸವೆದಿವೆ...
ಯಾದಗಿರಿ: ವಿಶ್ವ ಪ್ರಸಿದ್ಧದಂತಹ ವಜ್ರ ನಮ್ಮ ನೆಲದಲ್ಲಿ ಸಿಕ್ಕಿದೆ ಎಂಬುದು ನಮ್ಮ ಹೆಮ್ಮೆ. ಅಂತಹ ನೆಲೆಯನ್ನು ಪ್ರವಾಸಿತಾಣವಾಗಿ ನಿರ್ಮಾಣ ಮಾಡಿ ಅದಕ್ಕೊಂದು ಶಾಶ್ವತ ದೆಸೆ ಕಲ್ಪಿಸಬೇಕು. ಸರ್ಕಾರ ಅನುದಾನ ನೀಡುತ್ತದೆ.

ಆದರೆ, ಅದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಲು ಈ ಅಧಿಕಾರಿಗಳು ಏಕೆ ಹಿಂದೇಟು ಹಾಕುತ್ತಾರೋ ಗೊತ್ತಿಲ್ಲ. ಜಿಲ್ಲಾಧಿಕಾರಿಯಿಂದ ಹಿಡಿದು ಪ್ರಾದೇಶಿಕ ಆಯುಕ್ತರವರೆಗೂ ಕೊಹಿನೂರ ವಜ್ರ ಸಿಕ್ಕ ಸ್ಥಳ ಪ್ರವಾಸಿ ತಾಣವನ್ನಾಗಿಸಿ ಎಂದು ಅಲೆದು ಅಲೆದು ನನ್ನ ಚಪ್ಪಲಿಗಳು ಸವೆದಿವೆ. ಪ್ರವಾಸೋದ್ಯಮ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು ಕೊಳ್ಳುವುದೇ ಇಲ್ಲ. ಸಚಿವರಿಗಂತೂ ಅದರ ಉಸಾಬರಿ ಬೇಕಿಲ್ಲ...
 
ಪ್ರವಾಸೋದ್ಯಮ ಖಾತೆಯನ್ನೇ ಇಟ್ಟುಕೊಂಡಿರುವ ಸಚಿವರ ಜಿಲ್ಲೆಯಲ್ಲಿ ಇಂಥಾ ಸ್ಥಿತಿ, ನಿರ್ಲಕ್ಷ್ಯ ಇದೆ ಎಂದು ಭೀಮರಾಯನಗುಡಿ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರರಾವ್‌ ಮುಡಬೂಳ ಬೇಸರ ವ್ಯಕ್ತಪಡಿಸುತ್ತಾರೆ.
 
* ಪ್ರವಾಸೋದ್ಯಮ ಇಲಾಖೆಗೆ ಅಂತಹ ಪ್ರಸ್ತಾವ ಬಂದಿಲ್ಲ. ವಿಶ್ವಕ್ಕೆ ಕೊಹಿನೂರು ಕೊಟ್ಟ ಸ್ಥಳ ನಮ್ಮಲಿದೆ ಎಂಬುದೇ ಹೆಮ್ಮೆ.  ಸ್ಮಾರಕ ನಿರ್ಮಾಣಕ್ಕೆ ಕ್ರಮಕೈಗೊಳ್ಳುತ್ತೇನೆ
- ಪ್ರಿಯಾಂಕ್‌ ಎಂ.ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT