ಅಕ್ಕಿಆಲೂರ: ‘ನಮ್ಮ ಬದುಕಿನ ಕಲ್ಪನೆ ಸರಿ ಇಲ್ಲದೇ ನಾವಿಂದು ಹಲವು ಬಗೆಯ ಸಂಕಷ್ಟಗಳಿಗೆ ಈಡಾಗುತ್ತಿದ್ದೇವೆ. ಭಗವಂತನ ಅಸ್ತಿತ್ವದ ಕುರಿತು ನಮ್ಮ ಅರಿವಿನ ಮಟ್ಟ ಸುಧಾರಣೆಗೊಳ್ಳಬೇಕಿದೆ. ಭಗವಂತ ಭಕ್ತಿ ಬಯಸುತ್ತಾನೆಯೇ ವಿನಃ ಬಲಿಯನ್ನಲ್ಲ ಎಂಬುದನ್ನು ಅರಿತು ಸಾಗ ಬೇಕಿದೆ’ ಎಂದು ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ನುಡಿದರು.
ಹಾನಗಲ್ ಕುಮಾರ ಶಿವಯೋಗಿಗಳ ಮತ್ತು ಚನ್ನವೀರ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ‘ಅಕ್ಕಿಆಲೂರ ಉತ್ಸವ’ದ ಕಾರ್ಯಕ್ರಮದಲ್ಲಿ ಗುರುವಾರ ರಾತ್ರಿ ಪಾಲ್ಗೊಂಡು ಅವರು ಮಾತನಾಡಿದರು.
ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಬಾಳೂರಿನ ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ, ಗುಡ್ಡದ ಅನ್ವೇರಿಯ ವಿರಕ್ತಮಠದ ಶಿವಯೋಗಿ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಗೇರಿಯ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆಯ ಶಾಂತಕುಮಾರ ದೇಶಿಕರು ನೇತೃತ್ವ ವಹಿಸಿದ್ದರು. ಸಾಹಿತಿ ಭಾವನಾ ಕವಚಿ ಉಪನ್ಯಾಸ ನೀಡಿದರು.
ಉದಯಕುಮಾರ ವೀರಪಣ್ಣನವರ ಸ್ವಾಗತಿಸಿದರು. ನಾಗರಾಜ್ ಪಾವಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾವ್ಯಾ ಹುಲ್ಮನಿ, ಜ್ಯೋತಿ ಬಿ.ಎಂ. ಸ್ವಾಗತಿಸಿದರು. ನಂತರದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಚ್ಟಿಇಎಸ್ ಕಲಾ, ಎಸ್.ಬಿ.ಜಾಬೀನ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ‘ಸತ್ರೂ ಅಂದ್ರೆ ಸಾಯ್ತಾರೆ’ ನಾಟಕ ಪ್ರದರ್ಶಿಸಿದರು.
ಇಂದಿನ ಕಾರ್ಯಕ್ರಮ: 18 ರಂದು ಬೆಳಿಗ್ಗೆ 6 ಗಂಟೆಗೆ ದೀಕ್ಷಾ ಮತ್ತು ಅಯ್ಯಾಚಾರ ನಡೆಯಲಿದ್ದು, 8 ಗಂಟೆಗೆ ವೀರಭದ್ರೇಶ್ವರ ಗುಗ್ಗಳ ಹಾಗೂ ಪುಷ್ಪ ರಥೋತ್ಸವ ಜರುಗುವುದು. 10 ಗಂಟೆಗೆ ಗದುಗಿನ ಕ್ರೇಜಿ ಕಲರ್ಸ್ ಗ್ರೂಪ್ ಆಶ್ರಯದಲ್ಲಿ ಕಲಾ ಜಾತ್ರೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಮಹಾರಥೋತ್ಸವ ನಡೆಯುವುದು.
ಪಾದಯಾತ್ರೆ
ಅಕ್ಕಿಆಲೂರ: ಇಲ್ಲಿಯ ವಿರಕ್ತ ಮಠದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀ ಶರು ಗುರುವಾರ ಇಲ್ಲಿಂದ ಹಾನಗಲ್ನ ವಿರಕ್ತಮಠದವರೆಗೆ ‘ನಮ್ಮ ನಡಿಗೆ ಗುರುವಿನೆಡೆಗೆ’ ಪಾದಯಾತ್ರೆ ಕೈಗೊಂಡರು.
ಹಾನಗಲ್ ಕುಮಾರ ಸ್ವಾಮೀಜಿ ಮತ್ತು ಚನ್ನವೀರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 8 ದಿನಗಳಿಂದ ಇಲ್ಲಿಯ ಎಲ್ಲ ಬೀದಿಗಳಲ್ಲಿ ಜನಜಾಗೃತಿ ಪಾದಯಾತ್ರೆ ನಡೆಸಿದ ಶಿವಬಸವ ಸ್ವಾಮೀಜಿ ಹಾನಗಲ್ನ ವಿರಕ್ತಮಠದವರೆಗೆ 8 ಕಿ.ಮೀ. ಪಾದಯಾತ್ರೆ ಕೈಗೊಂಡು ಯಾತ್ರೆ ಮುಕ್ತಾಯಗೊಳಿಸಿದರು.
ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಹಾವೇರಿ ಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬಾಳೂರಿನ ಅಡವಿ ಸ್ವಾಮಿ ಮಠದ ಕುಮಾರ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತಿತರರಿದ್ದರು.