ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ, ತಮ್ಮನ್ನು ಚೆನ್ನೈ ಕಾರಾಗೃಹಕ್ಕೆ ಸ್ಥಳಾಂತರ ಮಾಡುವಂತೆ ವಿನಂತಿಸಿ ಸದ್ಯದಲ್ಲೇ ಎರಡೂ ರಾಜ್ಯಗಳ ಬಂಧಿಖಾನೆ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆಯಲಿದ್ದಾರೆ.
ತಮ್ಮ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಜೈಲಿನಿಂದ ಸ್ಥಳಾಂತರಗೊಳ್ಳಲು ಶಶಿಕಲಾ ಕಸರತ್ತು ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಮೂವರು ವಕೀಲರ ಜತೆ ನಿತ್ಯ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
‘ನಿಯಮಾಳಿ ಪ್ರಕಾರ ಕೈದಿಯ ಸ್ಥಳಾಂತರ ವಿಷಯದಲ್ಲಿ ಕಾರಾಗೃಹ ಇಲಾಖೆಯ ಮುಖ್ಯಸ್ಥರ ವಿವೇಚನಾಧಿಕಾರ ಮುಖ್ಯವಾಗಿರುತ್ತದೆ. ಇದಕ್ಕೆ ನ್ಯಾಯಾಲಯದ ಅನುಮತಿ ಪಡೆಯುವ ಅಗತ್ಯವಿಲ್ಲ. ಆ ರಾಜ್ಯಕ್ಕೆ ಸೇರಿದ ಪ್ರಕರಣವಾದ ಕಾರಣ ಸ್ಥಳಾಂತರಕ್ಕೆ ಅನುಮತಿ ಸಿಗಬಹುದು. ಆದರೆ, ಅದಕ್ಕೆ ತಕರಾರು ತೆಗೆದು ಯಾರಾದರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಶಶಿಕಲಾ ಅವರಿಗೆ ಅಡ್ಡಿಯಾಗಬಹುದು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಗುಪ್ತದಳ ನಿಗಾ: ಶಶಿಕಲಾ ಮೇಲೆ ನಿಗಾ ಇಟ್ಟಿರುವ ಬೆಂಗಳೂರು ಘಟಕದ ಐಬಿ (ಗುಪ್ತದಳ) ಅಧಿಕಾರಿಗಳು, ಜೈಲಿನಲ್ಲಿ ಅವರ ಚಲನವಲನ ಹೇಗಿದೆ, ಅವರನ್ನು ಯಾರ್್ಯಾರು ಭೇಟಿಯಾಗುತ್ತಿದ್ದಾರೆ, ಕಾರಾಗೃಹದ ಹೊರಗಡೆ ನಡೆಯುತ್ತಿರುವ ವಿದ್ಯಮಾನಗಳೇನು ಎಂಬ ಬಗ್ಗೆ ಅಧಿಕಾರಿಗಳಿಂದ ನಿತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ.