ಕೊಡಿಗೇನಹಳ್ಳಿ: ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದ ಮಗಳು ಸಾವಿಗೀಡಾದ ಕಾರಣ ಆಕೆಯ ಶವವನ್ನು ಪೋಷಕರು ಟಿವಿಎಸ್ ಮೊಪೆಡ್ನಲ್ಲಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಭಾನುವಾರ ಇಲ್ಲಿ ನಡೆಯಿತು.
ಹೋಬಳಿಯ ವೀರಾಪುರ ಗ್ರಾಮದ ತಿಮ್ಮಪ್ಪ ಅವರು ಜ್ವರದಿಂದ ಬಳಲುತ್ತಿದ್ದ ತಮ್ಮ ಮಗಳು ರತ್ನಮ್ಮ (20) ಅವರನ್ನು ಇಲ್ಲಿನ ಖಾಸಗಿ ಕ್ಲಿನಿಕ್ಗೆ ಕರೆದುಕೊಂಡು ಬಂದಿದ್ದರು. ಪರೀಕ್ಷಿಸಿದ ವೈದ್ಯರು ರತ್ನಮ್ಮ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.
ಇದರಿಂದ ಕಂಗಾಲಾದ ಪೋಷಕರು ಶವವನ್ನು ಸಾಗಿಸಲು ಪರದಾಡಿದರು. ಯಾವುದೇ ವಾಹನ ಲಭ್ಯ ಇಲ್ಲದ ಕಾರಣ ತಾವು ತಂದಿದ್ದ ಟಿವಿಎಸ್ ಮೊಪೆಡ್ನಲ್ಲೇ ಶವ ಸಾಗಿಸಿದರು. ಟಿವಿಎಸ್ ಹಿಂಭಾಗ ಶವವನ್ನು ಕೂರಿಸಿ ಅದನ್ನು ಮತ್ತೊಬ್ಬರು ಹಿಡಿದುಕೊಂಡು ಕೂತರು.
ಸ್ಥಳದಲ್ಲಿದ್ದ ಕೆಲವರು ಖಾಸಗಿ ಕಾರು ಕರೆಯಿಸುವುದಾಗಿ ಹೇಳಿದರು. ಆದರೆ, ನಮ್ಮ ಬಳಿ ಹಣ ಇಲ್ಲ ಎಂದ ಪೋಷಕರು ಯಾರನ್ನೂ ಕೇಳದೆ ಶವವನ್ನು ಟಿವಿಎಸ್ನಲ್ಲಿ ತೆಗೆದುಕೊಂಡು ಹೋದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಬುಲೆನ್ಸ್ ಸೇವೆ ಇಲ್ಲ. ಇದರಿಂದ ಶವ ಸಾಗಿಸಲು ತೊಂದರೆಯಾಯಿತು.