ಚಿತ್ರದುರ್ಗ: ಯಾವ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಕುಂಠಿತವಾಗಿದೆಯೋ ಅಂಥ ಜಿಲ್ಲೆಗಳಲ್ಲಿ ಪಕ್ಷವನ್ನು ಬಲಪಡಿಸುವುದಕ್ಕಾಗಿ ಕೋರ್ ಕಮಿಟಿ ಸದಸ್ಯರು ಪ್ರವಾಸ ಮಾಡುತ್ತಿದ್ದು, ತಳಮಟ್ಟದಿಂದ ಪಕ್ಷ ಸಂಘಟಿಸುವ ಕಾರ್ಯ ನಡೆಯುತ್ತಿದೆ’ ಎಂದು ಜೆಡಿಎಸ್ ಕೋರ್ಕಮಿಟಿ ಸದಸ್ಯ ಬಂಡೆಪ್ಪ ಕಾಶೆಂಪುರ ತಿಳಿಸಿದರು.
ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಜಿಲ್ಲಾ ಜೆಡಿಎಸ್ ಮುಖಂಡರೊಂದಿಗೆ ಸ್ಥಳೀಯ ರಾಜಕೀಯ ಬೆಳವಣಿಗೆಗಳ ವಿಚಾರ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಅವರು ಪಕ್ಷ ಸಂಘಟನೆ ಹಾಗೂ ಹಾಲಿ ಪಕ್ಷದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಕೋರ್ಕಮಿಟಿ ಸದಸ್ಯರಿಗೆ ವಹಿಸಿದ್ದಾರೆ. ಇಡೀ ತಂಡ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾ, ಬೂತ್ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ, ನೋಂದಾಯಿಸುವ ಕೆಲಸ ಮಾಡುತ್ತಿದೆ. ಇಲ್ಲಿವರೆಗೂ ನಡೆದಿರುವ ಚುನಾವಣೆ
ಯಲ್ಲಿ ಜೆಡಿಎಸ್ ತೋರಿರುವ ಸ್ಪರ್ಧೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಕುಮಾರಸ್ವಾಮಿ ಆಡಳಿತದಲ್ಲಾದ ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಜನರ ಬಳಿ ಹೋಗುವ ತೀರ್ಮಾನ ಮಾಡಲಾಗಿದೆ’ ಎಂದರು.
‘ಜೆಡಿಎಸ್ ಬೆಳವಣಿಗೆಯನ್ನು ಕಂಡು ಬೆರಗಾಗಿರುವ ಅನ್ಯ ಪಕ್ಷದ ನಾಯಕರು ಜೆಡಿಎಸ್ ಸೇರಲು ಆಸಕ್ತಿ ತೋರುತ್ತಿದ್ದಾರೆ. ಇವೆಲ್ಲವನ್ನು ಗಮನದಲ್ಲಿಟ್ಟು
ಕೊಂಡು ಪಕ್ಷದ ವರಿಷ್ಠ ದೇವೇಗೌಡರು ಚುನಾವಣೆ ಸಂದರ್ಭದಲ್ಲಿ ನಿಷ್ಠಾವಂತ ಹಾಗೂ ಪಕ್ಷದ ಹಳೆಯ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆ. ಹೊಸಬರಿಗೆ ಮಣೆ ಹಾಕುವ ಕೆಲಸ ಮಾಡುವುದಿಲ್ಲ’ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಈರಣ್ಣ, ಜಿಲ್ಲಾ ಜೆಡಿಎಸ್ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ನಿಶಾನಿ ಶಂಕರ್, ಶ್ರೀನಿವಾಸ್, ಉಮೇಶ್ಯಾದವ್, ರಾಘವೇಂದ್ರ, ನಿಜಲಿಂಗಪ್ಪ, ಲೋಕೇಶ್, ಯರ್ರಿಸ್ವಾಮಿ, ತಕ್ಕಡಿ ಸುರೇಶ್ ಹಾಜರಿದ್ದರು.