ಯಾದಗಿರಿ: ‘ಛತ್ರಪತಿ ಶಿವಾಜಿ ಮಹಾರಾಜರ ಸಾಹಸ ಗುಣಗಳನ್ನು ಇಂದಿನ ಮಕ್ಕಳು ಮೈಗೂಡಿಸಿಕೊಳ್ಳಬೇಕು’ ಎಂದು ಶಾಸಕ ಡಾ.ಎ.ಬಿ ಮಾಲಕರೆಡ್ಡಿ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ನಗರಸಭೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಜೀಜಾಬಾಯಿ ತಮ್ಮ ಪುತ್ರ ಶಿವಾಜಿಗೆ ಮಹಾಭಾರತ-ರಾಮಾಯಣ ಮಹಾಕಾವ್ಯಗಳ ವೀರಪುರುಷರ ಕಥೆಗಳನ್ನು ಹೇಳುವ ಮೂಲಕ ಮಹಾನ್ ಸಾಮ್ರಾಟನನ್ನಾಗಿ ಮಾಡಿದರು. ನೀವೂ ಕೂಡ ತಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಕಥೆಗಳನ್ನು ಹೇಳುವ ಮೂಲಕ ವೀರಪುತ್ರರನ್ನಾಗಿ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.
‘ತಮ್ಮ ಆಳ್ವಿಕೆಯಲ್ಲಿ ದೆಹಲಿವರೆಗೂ ಶಿವಾಜಿ ಸಾಮ್ರಾಜ್ಯ ವಿಸ್ತರಿಸಿದರು. ಹಾಗೆಯೇ ದೇಶದ ಸಂಸ್ಕೃತಿಯನ್ನೂ ಮೇಲೇತ್ತುವಲ್ಲಿ ಶ್ರಮಿಸಿದರು. ಇಂಥ ಮಹಾನ್ ಹೋರಾಟಗಾರನ ಜಯಂತಿ ಆಚರಿಸುತ್ತಿರುವ ಸರ್ಕಾರದ ಕ್ರಮ ಔಚಿತ್ಯಪೂರ್ಣವಾಗಿದೆ’ಎಂದರು.
ಉಪನ್ಯಾಸಕ ಡಾ.ಭೀಮರಾಯ ಲಿಂಗೇರಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮರಡ್ಡಿಗೌಡ ತಂಗಡಗಿ, ನಗರಸಭೆ ಅಧ್ಯಕ್ಷ ಶಶಿಧರರೆಡ್ಡಿ ಹೊಸಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟ್ಟಗಿ, ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗಣೇಶ್ ಬಾಪ್ಕರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಡಾ.ಸಿದ್ದರಾಜು ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಗೋಗಿ ಪ್ರಾರ್ಥನೆ ಗೀತೆ ಹಾಡಿದರು.