ಮಹಾಲಿಂಗಪುರ: ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ವರ್ಷಕ್ಕೊಮ್ಮ ಬಂದು ಹೋಗುವ ಸಾಮಾನ್ಯ ಹಾಗೂ ಸಹಜ ಸಂಗತಿಗಳು ಎಂದು ವ್ಯಕ್ತಿತ್ವ ವಿಕಸನದ ರಾಷ್ಟ್ರೀಯ ತರಬೇತುದಾರ ಸದಾನಂದ ನಾವಡ ಹೇಳಿದರು.
ಕೆಎಲ್ಇ ಪಾಲಿಟೆಕ್ನಿಕ್ ಆವರಣದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಜೆಸಿಐ ಮಹಾಲಿಂಗಪುರ ನಗರ ಘಟಕ ಶನಿವಾರ ಹಮ್ಮಿಕೊಂಡಿದ್ದ ‘ವ್ಯಕ್ತಿತ್ವ ವಿಕಸನ ಶಿಬಿರ, ಪರೀಕ್ಷೆ ಒಂದು ಹಬ್ಬ’ ಕಾರ್ಯಾಗಾರದ ಸಂವಾದಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಮನಸ್ಸಿನಿಂದ ನಿರಂತರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಯಶಸ್ಸು ಸಾಧಿಸುತ್ತಾರೆ. ಪರೀಕ್ಷಾ ಸಂದರ್ಭದಲ್ಲಿ ಅನಾವಶ್ಯಕ ಭಯ, ಒತ್ತಡ ಹಾಗೂ ಆತಂಕಗಳಿಂದ ಮುಕ್ತರಾಗಬಲ್ಲವರು ಮಾತ್ರ ಬದುಕಿನ ಎಲ್ಲ ಹಂತಗಳಲ್ಲಿಯೂ ಗೆಲ್ಲುತ್ತಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಕುರಿತು ತಪ್ಪು ಕಲ್ಪನೆ ನೀಡಿ ಹೆದರಿಸುವವರು ಸಾಕಷ್ಟು ಜನರಿದ್ದಾರೆ. ಅಂಥವರ ಮಾತುಗಳಿಗೆ ಗಮನ ನೀಡದೆ ವಿದ್ಯಾರ್ಥಿಗಳು ಪರೀಕ್ಷೆ ಎಂಬುದೊಂದು ಸಾಮಾನ್ಯ ಪ್ರಕ್ರಿಯೆ, ವರ್ಷಕ್ಕೊಮ್ಮ ಬರುವ ಹಬ್ಬ ಎಂದು ಭಾವಿಸಿ ಸಂಭ್ರಮದ ಮನೋಭಾವ ಬೆಳೆಸಿಕೊಳ್ಳುವವರು ಭಯ ಮುಕ್ತರಾಗಿ ಪರೀಕ್ಷೆ ಎದುರಿಸಲು ಸಫಲರಾಗುತ್ತಾರೆ ಎಂದು ಹೇಳಿದರು.
ಕಾನ್ಪುರ ಐಐಟಿಯಲ್ಲಿ ವ್ಯಾಸಂಗ ಮಾಡಿದ ಸ್ಥಳೀಯ ಪ್ರತಿಭೆ ಹರ್ಷವರ್ದನ ವಜ್ಜರಮಟ್ಟಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗೆ, ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಗ್ರಹಿಸಿಕೊಳ್ಳುವ ಬಗೆ ಕುರಿತು ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಂಡರು. ಅತ್ಯಂತ ಕಡುಬಡತನದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಲ್ಲ ಪೈಪೋಟಿಗಳನ್ನು ಎದುರಿಸಿ ತಾಂತ್ರಿಕ ಕ್ಷೇತ್ರದಲ್ಲಿ ತಾನು ಮಾಡಿದ ಸಾಧನೆಯನ್ನು ವಿವರಿಸಿದಾಗ ವಿದ್ಯಾರ್ಥಿಗಳು ಪುಳಕಗೊಂಡರು.
ಪಟ್ಟಣದ ಸುತ್ತಲಿನ ಸರ್ಕಾರಿ ಪ್ರೌಢಶಾಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ವಿದ್ಯಾರ್ಥಿನಿಯರ ಕ್ರಿಯಾಶೀಲ ಭಾಗವಹಿಸುವಿಕೆ ಗಮನ ಸೆಳೆಯಿತು. ಶಂಕರ ಮುರಗೋಡ, ಶಿವಾನಂದ ತಿಪ್ಪಾ, ಪ್ರಾ.ಎಸ್.ಐ. ಕುಂದಗೋಳ, ಜಮಖಂಡಿ, ಮುಧೋಳ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದರು.