ಬಾಗಲಕೋಟೆ: ನಗರದಲ್ಲಿ ಯಾರಾದರೂ ಸತ್ತರೆ ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಶವ ಕೊಂಡೊಯ್ಯಲು ಎರಡು ಸುಸಜ್ಜಿತ ವಾಹನಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ನಗರಸಭೆ ಆಡಳಿತಕ್ಕೆ ದೇಣಿಗೆ ನೀಡಿದೆ.
ಇಲ್ಲಿಯವರೆಗೂ ಬಿ.ವಿ.ವಿ ಸಂಘ ಹಾಗೂ ನಗರಸಭೆಯ ಶವ ಸಾಗಣೆ ವಾಹನಗಳು ಸಾರ್ವಜನಿಕರಿಗೆ ನೆರವಾಗಿದ್ದವು. ಇದೀಗ ಬಿಟಿಡಿಎ ನೀಡಿದ ಎರಡು ವಾಹನಗಳು ಈ ಕೆಲಸಕ್ಕೆ ಮೀಸಲಾಗಲಿದ್ದು, ನಗರದ ವ್ಯಾಪ್ತಿಯಲ್ಲಿ ಶವ ಕೊಂಡೊಯ್ಯುವ ವಾಹನಗಳ ಕೊರತೆ ನೀಗಿದಂತಾಗಿದೆ. ಬೆಂಜ್ ಕಂಪೆನಿಯ ಈ ಎರಡೂ ವಾಹನಗಳನ್ನು ₹ 35 ಲಕ್ಷ ವೆಚ್ಚದಲ್ಲಿ ಖರೀದಿಸಿ ಶವ ಸಾಗಣೆಗೆ ಅನುಕೂಲವಾಗುವಂತೆ ಸಜ್ಜುಗೊಳಿಸಲಾಗಿದೆ.
ಉಚಿತ ಸೇವೆ
‘ಸಾರ್ವಜನಿಕರಿಗೆ ದಿನದ 24 ಗಂಟೆಯೂ ಈ ವಾಹನಗಳ ಸೇವೆ ಲಭ್ಯವಿದೆ. ವಾಹನ ಸೇವೆ ಸಂಪೂರ್ಣ ಉಚಿತವಾಗಿದೆ. ಮೊದಲು ನಗರಸಭೆಯಿಂದ ಶವ ಸಾಗಣೆಗೆ ಒಂದು ಟಾಟಾ ಏಸ್ ವಾಹನ ಮೀಸಲಿಡಲಾಗಿತ್ತು. ಅದಕ್ಕೆ ₹400 ಶುಲ್ಕ ಭರಿಸಬೇಕಿತ್ತು. ಈಗ ಬಿಟಿಡಿಎ ದೇಣಿಗೆ ನೀಡಿರುವ ವಾಹನಗಳ ಡೀಸೆಲ್, ಚಾಲಕರ ವೇತನ, ಭತ್ಯೆಯನ್ನು ನಾವೇ ಭರಿಸಲಿದ್ದೇವೆ. ಹಾಗಾಗಿ ಸಾರ್ವಜನಿಕರು ಹಣ ಪಾವತಿಸುವ ಅಗತ್ಯವಿಲ್ಲ’ ಎಂದು ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ ಹೇಳುತ್ತಾರೆ.
ಜಾತಿ–ಧರ್ಮದ ಬೇಧವಿಲ್ಲ:
ಹಿಂದು,ಮುಸ್ಲಿಮ್ ಹಾಗೂ ಕ್ರೈಸ್ತ ಸಮುದಾಯದ ಏಳು ಸ್ಮಶಾನಗಳು ನಗರಸಭೆ ಹಾಗೂ ಬಿಟಿಡಿಎ ವ್ಯಾಪ್ತಿಯಲ್ಲಿ ಇವೆ. ಮೂರು ಧರ್ಮಗಳ ಬಡವರು ಯಾವುದೇ ಜಾತಿ–ಬೇಧವಿಲ್ಲದೇ ಈ ವಾಹನಗಳ ಉಪಯೋಗ ಮಾಡಿಕೊಳ್ಳಬಹುದಾಗಿದೆ. ಸಾಗಣೆ ವೇಳೆ ಶವ ಕೂರಿಸಿ ಕೊಂಡೊಯ್ಯುವುದಾದರೆ ಅದಕ್ಕೆ ಸುಸಜ್ಜಿತ ಕುರ್ಚಿ, ಮಲಗಿಸಿ ಒಯ್ಯುವುದಾದರೆ ಅದಕ್ಕೆ ಅಗತ್ಯವಿರುವ ಮಂಚವನ್ನು ರೂಪಿಸಲಾಗಿದೆ.
ಮೂರು ಧರ್ಮಗಳ ನಂಬಿಕೆ, ಧಾರ್ಮಿಕ ಪರಂಪರೆಗೆ ಅನುಗುಣವಾಗಿ ಶವ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ಧರ್ಮಗಳ ಪ್ರಾರ್ಥನೆ ಗೀತೆಗಳನ್ನು ವಾಹನಗಳಿಗೆ ಅಳವಡಿಸಲಾಗಿದೆ ಹಾಗಾಗಿ ಎಲ್ಲರೂ ಬಳಕೆ ಮಾಡಬಹುದು ಎಂದು ಕಲಾದಗಿ ತಿಳಿಸಿದರು. ಶವ ಸಾಗಿಸುವಾಗ ವಾಹನಗಳ ಒಳಗೆ 15ರಿಂದ 20 ಮಂದಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದ್ದು, ನಗರದ ವ್ಯಾಪ್ತಿಯಲ್ಲಿ ಆಸ್ಪತ್ರೆ ಇಲ್ಲವೇ ಮನೆಯಿಂದ ಶವವನ್ನು ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ಯಲು ಮಾತ್ರ ಈ ಸೇವೆ ಬಳಕೆ ಮಾಡಿಕೊಳ್ಳಬಹುದಾಗಿದೆ.
ವಾಹನ ಬೇಕಿದ್ದವರು (ದಲಾಯತ್–9945874782) ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ಕಲಾದಗಿ ತಿಳಿಸಿದರು.