ಮಾಲೂರು: ಎಲ್ಲ ಜನಾಂಗದವರ ಸಮಾನ ಅಭಿವೃದ್ಧಿಗೆ ಶ್ರಮಿಸಿದ ಶಿವಾಜಿ ಜಗತ್ತು ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಶಾಸಕ ಕೆ.ಎಸ್.ಮಂಜುನಾಥ್ಗೌಡ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಭಾನುವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಜಗತ್ತಿನಲ್ಲಿ ಹಲವಾರು ವೀರ, ಶೂರ, ಮಹಾರಾಜರು ಆಳಿ ಹೋಗಿದ್ದಾರೆ. ಅವರಲ್ಲಿ ಜಾಣ ರಾಜ ಶಿವಾಜಿ ಮಹಾರಾಜರು. ವಿಶ್ವ ಮಾನ್ಯ ನಾಯಕರಾಗಿ ಗುರುತಿಸಲ್ಪಡುತ್ತಾರೆ. ಜಾತಿ, ಭಾಷೆಗಳ ಭೇದ ಎಣಿಸದೆ ಮಹಿಳೆಯರಲ್ಲಿ ತಾಯಿಯನ್ನು ಕಾಣುತ್ತಿದ್ದ ರಾಷ್ಟ್ರ ರಕ್ಷಕ, ಕೋಮು ಸೌರ್ಹಾದದ ಪ್ರತಿಪಾದಕರಾಗಿದ್ದ ಶಿವಾಜಿ ಮಹಾರಾಜರ ಜೀವನ ನಮಗೆ ಆರ್ದಶ ಪ್ರಾಯವಾಗಿದೆ ಎಂದರು.
ಶಿವಾಜಿ ಜಯಂತಿ ಆಚರಣೆಗೆ ಸರ್ಕಾರ ನೀಡುತ್ತಿರುವ ₹ 25 ಸಾವಿರವನ್ನು ಸಮುದಾಯದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಿರುವುದು ಸ್ವಾಗರ್ತಾಹ ಎಂದರು.
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ನ್ನು ಶಾಸಕ ಕೆ.ಎಸ್.ಮಂಜುನಾಥ್ಗೌಡ ವಿತರಿಸಿದರು. ತಹಶೀಲ್ದಾರ್ ಗಿರೀಶ್, ತಾಲ್ಲೂಕು ಮರಾಠಿಗರ ಸಂಘದ ಅಧ್ಯಕ್ಷ ರಾಣೋಜಿ ರಾವ್, ಗೋಪಾಲ್ ರಾವ್, ಶಿವಾಜಿರಾವ್, ಬಾಬುರಾವ್, ನರಸಿಂಹರಾವ್, ಮಾಸ್ತಿ ಮೋಹನ್ ಭಾಗವಹಿಸಿದ್ದರು.