ಬಂಗಾರಪೇಟೆ: ಕೋಚಿಮುಲ್ ಹಾಲು ವಿಶ್ವದಾದ್ಯಂತ ಮಾರಾಟ ಆಗುತ್ತಿದೆ. ಖಾಸಗಿ ಡೇರಿಗಳೊಂದಿಗೆ ಪೈಪೋಟಿ ನೀಡಬೇಕಾದರೆ ರೈತರು ಗುಣಮಟ್ಟದ ಹಾಲು ಪೂರೈಸಬೇಕು ಎಂದು ಹಾಲು ಒಕ್ಕೂಟದ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ತ್ಯಾರನಹಳ್ಳಿ ಗ್ರಾಮದಲ್ಲಿ 11ನೇ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ಬರಗಾಲದಲ್ಲಿಯೂ ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಿಂದೆ ರೈತರ ಉಪ ಕಸುಬಾಗಿದ್ದ ಹೈನೋದ್ಯಮ ಈಗ ಮುಖ್ಯ ಕಸುಬಾಗಿ ಮಾರ್ಪಟ್ಟಿದೆ ಎಂದರು.
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರಗಳು ಶಾಶ್ವತ ನೀರಾವರಿ ಕಲ್ಪಿಸಿ, ಕೃಷಿಗೆ ಉತ್ತೇಜನ ನೀಡಬೇಕಿದೆ. ಆದರೆ ಬರೀ ಸುಳ್ಳು ಭರವಸೆಗಳನ್ನು ನೀಡಿ, ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಟೀಕಿಸಿದರು.
ಇಂದಿನ ರಾಜಕಾರಣ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜನರ ಪರವಾಗಿ ಕೆಲಸ ಮಾಡುವವರಿಗೆ ಉಳಿಗಾಲವಿಲ್ಲ. ಭ್ರಷ್ಟರಿಗೆ ಶುಕ್ರದೆಸೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ವೆಂಕಟರಮಣ ಮಾತನಾಡಿ, ಹಾಲು ಸಹಕಾರ ಸಂಘಗಳು ಕೋಲಾರ ಜಿಲ್ಲೆಗೆ ವರದಾನವಾಗಿವೆ. ಆದರೆ ಸಂಘದ ಆಡಳಿತದಲ್ಲಿ ರಾಜಕೀಯ ಬೆರಿಸಿ, ಸುಮಾರು 69 ಸಂಘಗಳು ಮುಚ್ಚಲಾಗಿದೆ. ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಒಕ್ಕೂಟದಿಂದ ದೊರೆಯುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಸಭೆಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ವೆಂಕಟ ಲಕ್ಷ್ಮಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ನಾಗರಾಜ್, ಅಧಿಕಾರಿಗಳಾದ ಚಂದ್ರಶೇಖರರಾಜು, ವೇಣುಗೋಪಾಲ್, ಸಬ್ ಇನ್ಸ್ಪೆಕ್ಟರ್ ಸಿ.ರವಿಕುಮಾರ್, ಮುಖಂಡರಾದ ಕೆ.ಸಿ.ಗೋಪಾಲ್, ಟಿ.ಎನ್.ರಾಮೇಗೌಡ, ರಾಮರೆಡ್ಡಿ, ಹನುಮಪ್ಪ ಇದ್ದರು.