ಬೆಂಗಳೂರು: ‘ಬಿಜೆಪಿ ವಿರುದ್ಧ ನಾವೂ ಹೋರಾಟ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸೋಮವಾರ ನಡೆಸಿದ ಪ್ರತಿಭಟನೆ ಕುರಿತು ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು. ಪಕ್ಷದ ವತಿಯಿಂದ ಬಿಜೆಪಿ ವಿರುದ್ಧವೂ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
‘ಯಡಿಯೂರಪ್ಪ ದೇಶದಲ್ಲೇ ದೊಡ್ಡ ಭ್ರಷ್ಟ ರಾಜಕಾರಣಿ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ‘ಜೈಲಿಗೆ ಹೋಗಿಬಂದ ವ್ಯಕ್ತಿಯಿಂದ ನಾವು ಪಾಠ ಕಲಿಯಬೇಕಾಗಿಲ್ಲ’ ಎಂದೂ ಸಿದ್ದರಾಮಯ್ಯ ಅವರು ಹೇಳಿದರು. ‘ನಾವು ಹೈಕಮಾಂಡ್ಗೆ ಕಪ್ಪ ನೀಡಿದ್ದೇವೆ ಎಂಬ ಆರೋಪ ನಿರಾಧಾರ’ ಎಂದು ಅವರು ಪುನರುಚ್ಚರಿಸಿದರು.
‘ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರು ಮಾತನಾಡಿರುವ ಸಿ.ಡಿಯಲ್ಲಿ ಬಿಜೆಪಿ ಬಣ್ಣ ಬಯಲಾಗಿದೆ. ಇದು ಕ್ರಿಮಿನಲ್ ಅಪರಾಧಕ್ಕೆ ಸಮ. ಬಿಜೆಪಿಯದು ರಾಜಕೀಯ ಉದ್ದೇಶದ ಹೋರಾಟ’ ಎಂದು ಅವರು ಲೇವಡಿ ಮಾಡಿದರು.