ಬೆಂಗಳೂರು: ಕಂಬಳ ಹಾಗೂ ಹೋರಿ ಬೆದರಿಸುವ ಓಟಕ್ಕೆ ಅವಕಾಶ ಕಲ್ಪಿಸಲು ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದ್ದ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದಾರೆ.
‘ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆ–2017’ರ ಕುರಿತು ಸರ್ಕಾರ ಮಂಡಿಸಿದ್ದ ಮಸೂದೆ ಮೇಲೆ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ಅನುಮೋದನೆ ನೀಡಲಾಗಿತ್ತು. ಆನಂತರ ಅದನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
‘ಪ್ರಾಣಿ ಹಿಂಸೆಗೆ ತಡೆ ನೀಡಿದ್ದ 1966ರ ಕಾಯ್ದೆ ಕೇಂದ್ರ ಸರ್ಕಾರದ್ದು. ಕರ್ನಾಟಕ ವಿಧಾನಮಂಡಲ ಒಪ್ಪಿಗೆ ನೀಡಿದರೂ ಕೇಂದ್ರದ ಕಾಯ್ದೆಗೆ ತಿದ್ದುಪಡಿ ತರಬೇಕಾದ ಅವಶ್ಯಕತೆ ಇರುವುದರಿಂದ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿರಬಹುದು’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾದ ಮಸೂದೆ ಪುನಃ ಗೃಹ ಸಚಿವಾಲಯ, ಕಾನೂನು ಮತ್ತು ಸಂಸದೀಯ ಸಚಿವಾಲಯಕ್ಕೆ ಹೋಗಬೇಕಿದೆ. ಕಾನೂನು ಸಚಿವಾಲಯ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕವಷ್ಟೆ ರಾಷ್ಟ್ರಪತಿ ಅಂಗೀಕಾರ ನೀಡುವ ಪದ್ಧತಿ ಇದೆ.
ಹೀಗಾಗಿ ಕಂಬಳ ಕ್ರೀಡೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಿದರೂ ಕೊನೆಗೂ ಇದು ಕೇಂದ್ರ ಸರ್ಕಾರದ ಅಂಗಳಕ್ಕೆ ಹೋಗಿದೆ. ಹೀಗಾಗಿ ಸದ್ಯಕ್ಕೆ ಕಂಬಳ ಕ್ರೀಡೆಗೆ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.