ಮೊಳಕಾಲ್ಮುರು: ನಾಯಕ ಜನಾಂಗದ ಅಪ್ಪಟ ಬುಡಕಟ್ಟು ಸಂಸ್ಕೃತಿಗಳನ್ನು ಬಿಂಬಿಸುವ ತಾಲ್ಲೂಕಿನ ತುಮಕೂರ್ಲ ಹಳ್ಳಿ ಸಮೀಪದ ಊಟೆಕುಂಟೆ ಒಡರಹಟ್ಟಿ ಸಮೀಪದ ಮಲಿಯಮ್ಮನ ಬಂಡೆ ಆವರಣದಲ್ಲಿ ಅಪರೂಪದ ‘ಶ್ರೀಶೈಲ ಪದಿ ಮುತ್ತಯ್ಯಗಳ ಜಾತ್ರೆ’ಗೆ ಚಾಲನೆ ನೀಡಲಾಗಿದೆ.
27 ವರ್ಷಗಳ ನಂತರ ಈ ಜಾತ್ರೆ ನಡೆಯುತ್ತಿದೆ. ಇದರ ಅಂಗವಾಗಿ ಫೆ.7ರಂದು ಕಾರ್ಯಕ್ರಮಗಳು ಆರಂಭವಾಗಿವೆ. 7ರಂದು ಒಂದನೇ ಮಲದೇವರು, 10ರಂದು ಎರಡನೇ ಮಲದೇವರು, 14ರಂದು ಮೂರನೇ ಸಾರು ಮಲದೇವರು, ಸಂಜೆ ಕುಲಬಾಂಧವರು ಹಾಗೂ ಕೋಮಿಗೆ ಸೇರಿದ
ವರು ಪಚ್ಚಪದಿಗೆ ಬಂದು ಸಾರು ಹಾಕಿದರು.
19ರಂದು ಸಂಜೆ ದೇವರಹಟ್ಟಿಯ ಪದಿನಾರ್ನ ದೇವರು, ಚಿಕ್ಕುಂತಿ ದಡ್ಡಿಮುತ್ತಿ ದೇವರು, ರಾಯಾಪುರ ದೇವರಹಟ್ಟಿಯ ಗಾದ್ರಿ ದೇವರು, ಹಿರೇಕೆರೆಹಳ್ಳಿಯ ದಾದಗನಾರು ದೇವರು, ರಾಯಾಪುರದ ಬೋಸೇ ದೇವರು, ಡಿ.ಸಿದ್ದಾಪುರದ ದಾದಗನೂರು ದೇವರು, ಹಿರೇಕೆರೆಹಳ್ಳಿಯ ರಾಬಲು ದೇವರು, ಮ್ಯಾರಹಟ್ಟಿಯ ಕಡೇಲು ದೇವರು, ರಾಯಾಪುರದ ದೇವರಹಳ್ಳಿ ಗಾದ್ರಿ ದೇವರು, ದೇವರಹಳ್ಳಿಯ ದಡ್ಲು ಮಾರಮ್ಮ ಪೆಟ್ಟಿಗೆ ದೇವರು ಮಲಿಯಮ್ಮನಹಟ್ಟಿ ದೇವಸ್ಥಾನ ಆವರಣಕ್ಕೆ ಬಂದು ದಡ್ಡಿಮುತ್ತಿಗೆ ನಮಸ್ಕಾರ ಮಾಡಿಕೊಂಡವು.
ಸೋಮವಾರ ಶ್ರೀಶೈಲ ಪದಿಮುತ್ತಿಗಾರ ಎತ್ತುಗಳಿಗೆ ಮೀಸಲು ಅರ್ಪಿಸಿದ ನಂತರ ದೇವರ ಎತ್ತುಗಳನ್ನು ಹರಿಸಲಾಯಿತು. ಫೆ.21ರಂದು ಸೌರದ ಮೀಸಲು ಪಚ್ಚಪದಿಯಲ್ಲಿ ಒಪ್ಪಿಸುವುದು, ದಡ್ಲು ಮಾರಮ್ಮದೇವಿ ಪ್ರವೇಶ, ಹರಕೆಗಳ ಸಮರ್ಪಣೆ ನಡೆಯಲಿದೆ. ಬುಧವಾರ ಜಾತ್ರೆ ನಡೆಯಲಿದ್ದು, ಗುರುವಾರ ದೇವರು ಮರಳಿ ಸ್ವಗ್ರಾಮಗಳಿಗೆ ತೆರಳುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.