ಔರಾದ್: ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಅರಳಲು ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಬೀದರ್ ಸ್ವಾಮಿ ವಿವೇಕಾನಂದ ಆಶ್ರಮದ ಜೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ಪ್ರೇರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಶಾಂತಿ, ವಿನಯ ಮತ್ತು ಬೇರೆಯವರನ್ನು ಪ್ರೀತಿಸುವ ಗುಣ ಇರಬೇಕು. ಆ ಮೇಲೆ ನಿರಂತರ ಅಧ್ಯಯನ ಮಾಡಬೇಕು. ಜೊತೆಗೆ ಮನಸ್ಸು ನಿಯಂತ್ರಿಸಲು ರೂಢಿ ಮಾಡಿಕೊಳ್ಳಬೇಕು. ಕೆಟ್ಟ ಚಟಗಳಿಗೆ ಒಳಗಾದವರಿಗೆ ಮಾನಸಿಕ ನಿಯಂತ್ರಣ ತಪ್ಪುತ್ತದೆ. ಇದರಿಂದ ಗುರಿ ಸಾಧಿಸಲು ಹಿನ್ನಡೆಯಾಗುತ್ತದೆ
ಎಂದು ಹೇಳಿದರು.
ವಿದ್ಯಾರ್ಥಿಗಳು ಒಂದಿಷ್ಟು ಮಹಾತ್ಮರ ಚರಿತ್ರೆ ತಿಳಿದುಕೊಳ್ಳಬೇಕು. ಅವರು ತಮ್ಮ ಬದುಕಿನಲ್ಲಿ ದೊಡ್ಡ ದೊಡ್ಡ ಸಂಕಷ್ಟಗಳ ನಡುವೆ ಮಾಡಿರುವ ಸಾಧನೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಬಸವರಾಜ ಚಿಕ್ಲೆ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಒಂದು ಭಾಗವಾದರೆ, ಮನುಷ್ಯ ಜೀವನ ಪರಿಪೂರ್ಣವಾಗಲು ಮಹಾತ್ಮರ ಚಿಂತನೆಗಳು ಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ವಿದ್ಯೆ ಜೊತೆಗೆ ವಿನಯ ಮತ್ತು ಉತ್ತಮ ಸಂಸ್ಕಾರ ಅಗತ್ಯ ಎಂದು ತಿಳಿಸಿದರು. ಉಪನ್ಯಾಸಕ ಅರುಣ ಮೊಕಾಶಿ ಸ್ವಾಗತಿಸಿದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.