ಕೊಪ್ಪಳ: ನೋಟುಗಳಲ್ಲಿ ಗಾಂಧೀಜಿ ಅವರ ಜತೆಗೆ ಡಾ.ಬಿ.ಆರ್್ ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಣ ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ದೇಶದ ರೂಪಾಯಿ ನೋಟಿನಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಮೂಲಭೂತ ಹಕ್ಕಾಗಿಸಬೇಕು. ಹಿಂದುಳಿದ ವರ್ಗಗಳ ಜನಸಂಖ್ಯೆಗನುಗುಣವಾಗಿ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಶೇ 25ರಷ್ಟು ಹಣ ಮೀಸಲಿಟ್ಟು ವಿನಿಯೋಗಕ್ಕೆ ಕಾಯ್ದೆ ಮಾಡಬೇಕು. ಕೋಮುವಾದ, ಭಯೋತ್ಪಾದನೆ, ಭ್ರಷ್ಟಾಚಾರ ಮುಕ್ತವಾಗಬೇಕು. ಚುನಾವಣಾ ಪದ್ಧತಿ ಬದಲಿಸಬೇಕು. ಚುನಾವಣೆಯಲ್ಲಿ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು ಚುನಾವಣಾ ಆಯೋಗ ನೀಡುವಂತೆ ತಿದ್ದುಪಡಿ ಮಾಡಬೇಕು ಎಂದು ಪ್ರತಿಭಟನಕಾರರು ಹೇಳಿದರು.
ಜಿಲ್ಲಾ ಸಂಚಾಲಕ ಜಿ.ಹಂಪೇಶ್ ಹರಿಗೋಲ್, ಮುಖಂಡರಾದ ಹನುಮಂತಪ್ಪ ನಾಯಕ, ಕೆ.ವೆಂಕಟೇಶ್ ನೀರಲೂಟಿ, ದುರುಗಪ್ಪ ದೊಡ್ಡಮನಿ, ಟಿ.ಕೃಷ್ಣ ಹೆಗಡೆ, ಹನುಮಂತಪ್ಪ ದೊಡ್ಡಮನಿ, ಶಿವಪ್ಪ ಹಿರೆವಡ್ರಕಲ್, ಎಚ್. ಪಂಪಾಪತಿ ಸಿದ್ದಾಪುರ, ಟಿ.ಹನುಮಂತಪ್ಪ ನಾಯಕ, ಇಬ್ರಾಹಿಂ ಗಂಗಾವತಿ, ಶಂಕರ್ ಕಲಬಾವಿ ಇದ್ದರು.