ಶಹಾಪುರ:‘ಸರ್ವರು ಕೂಡಿ ಬಾಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಹೊಂದಾಣಿಕೆಯ ಮೂಲಕ ಅನ್ಯ ಸಮುದಾಯಗಳ ಜತೆ ಸೌಹಾರ್ದ ಜೀವನ ನಡೆಸಲು ಮುಂದಾಗಬೇಕು ಎಂದು ಸಾಹಿತಿ ಶಿವಣ್ಣ ಇಜೇರಿ ಹೇಳಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಮೌಢ್ಯ, ಅಂಧಕಾರ ಹಾಗೂ ಮೂಢನಂಬಿಕೆಗಳ ಬಗ್ಗೆ ಕವಿ ಸರ್ವಜ್ಞ ನಾಗರಿಕ ಸಮಾಜದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ್ದರು. ಶೋಷಣೆ ವಿರುದ್ದ ಮೊದಲು ರಣಕಹಳೆಯನ್ನು ಊದಿದರು. ಆದರೆ ಇಂದು ಶರಣರ ಜಯಂತ್ಯುತ್ಸವ ಆಯಾ ಜಾತಿ ಸಮುದಾಯಗಳಿಗೆ ಸಂಕುಚಿತಗೊಳ್ಳುತ್ತಿರುವುದು ಬೇಸರ ಮೂಡಿಸಿದೆ ಎಂದರು.
ಶರಣರ ತತ್ವ ಆಚಾರ ವಿಚಾರಗಳನ್ನು ಅನುಸರಿಸಬೇಕು. ಸರ್ವಜ್ಞ ಅವರು ತಮ್ಮ ಮೊನಚು ವಚನಗಳ ಮೂಲಕ ಅರಿವಿನ ಬೆಳಕನ್ನು ವಿಸ್ತರಿಸಿದ್ದರು ಎಂದು ಅವರು ಹೇಳಿದರು. ಕುಂಬಾರ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಗುಡಗುಂಟಿ ಅಧ್ಯಕ್ಷತೆ ವಹಿಸಿದ್ದರು.
ನಗರ ಯೋಜನಾ ಪ್ರಾಧಿಕರಾದ ಅಧ್ಯಕ್ಷ ಸಲೀಂ ಸಂಗ್ರಾಮ ಹಾಗೂ ಕುಂಬಾರ ಸಮಾಜದ ಮುಖಂಡರಾದ ಸಿದ್ರಾಮಪ್ಪ ಮ್ಯಾಗಿನಮನಿ, ಅಮರಪ್ಪ ಗುಡಗುಂಟಿ, ಸಿದ್ರಾಮಪ್ಪ ಕೆವಟ್ಟಿಗಿ, ಸಿದ್ರಾಮಪ್ಪ ಯಾಳಗಿ, ಚಂದ್ರಶೇಖರ ಯಾಳಗಿ, ಸಂಗಣ್ಣ ಹಾಗೂ ತಾಲ್ಲೂಕಿನ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇದಕ್ಕೂ ಮೊದಲು ಸಿ.ಬಿ.ಕಮಾನಿನಿಂದ ಬಸವೇಶ್ವರ ವೃತ್ತದ ಮೂಲಕ ನಗರಸಭೆಯ ವೇದಿಕೆಯವರೆಗೆ ಸರ್ವಜ್ಞ ಕವಿಯ ಭಾವಚಿತ್ರದ ಮೆರವಣಿಗೆ ನಡೆಗಿತು.