ಕೊಪ್ಪಳ: ಶಿಕ್ಷಣದಿಂದ ಸರ್ಕಾರಿ ನೌಕರಿ ಸಿಗದಿದ್ದರೂ ಯುವಕರು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಡಾ.ಬಿ.ಆರ್ ಅಂಬೇಡ್ಕರ್ 125ನೇ ಜಯಂತಿ ಆಚರಣೆ ಅಂತರರಾಷ್ಟ್ರೀಯ ಸಮ್ಮೇಳನ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸಮ್ಮೇಳನ ಆಯೋಜನಾ ಸಮಿತಿ, ಮಹರ್ಷಿ ಶಿಕ್ಷಣ, ಸಾಂಸ್ಕೃತಿಕ ಕಲಾ ಸಂಸ್ಥೆ ಆಶ್ರಯದಲ್ಲಿ ನಡೆದ ಜ್ಞಾನದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಮಹಾತ್ಮರು ಹಲವಾರು ಕಷ್ಟಗಳನ್ನು ಎದುರಿಸಿ ಸಾಧನೆ ಮಾಡಿದ್ದಾರೆ. ಉತ್ತಮ ಜೀವನ ರೂಪಿಸಿಕೊಳ್ಳಲು ಇದು ಸಹಕಾರಿ. ಸ್ವಾತಂತ್ರ್ಯತೆಗೆ ಮತ್ತು ದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಸಂವಿಧಾನ ಬಹುಮುಖ್ಯ. ಅಂಬೇಡ್ಕರ್ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಸಂವಿಧಾನದಲ್ಲಿ ಅನೇಕ ಕಾನೂನುಗಳನ್ನು ರಚಿಸಿದ್ದಾರೆ. ಅವರ ಆಶಯದಂತೆ ನಾವೆಲ್ಲ ಸಮಾಜದಲ್ಲಿನ ಮೌಢ್ಯ ಆಚರಣೆಗಳನ್ನು ತಡೆಯಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚಿನ ಶ್ರಮ ಅವಶ್ಯಕ. ಇಂದು ಶಿಕ್ಷಣ ಉದ್ಯಮವಾಗಿದೆ. ಬಡ ವಿದ್ಯಾರ್ಥಿಗಳು ಸರ್ಕಾರ ಜಾರಿಗೊಳಿಸಿರುವ ಅನೇಕ ಯೋಜನೆಗಳ ಮಾಹಿತಿ ಪಡೆದು ವ್ಯಾಸಂಗ ಪೂರ್ಣಗೊಳಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಡಾ.ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿ, ಅನೇಕ ಚಾರಿತ್ರಿಕ ಮೈಲುಗಲ್ಲುಗಳಿಗೆ ಅಂಬೇಡ್ಕರ್ ಸಾಕ್ಷಿಯಾಗಿದ್ದಾರೆ. ದಿನಕ್ಕೆ 18 ತಾಸು ಓದುತ್ತಿದ್ದರು. ಈ ದೇಶದಲ್ಲಿ ಹಣ, ಅಧಿಕಾರ, ಆಸ್ತಿ, ಭೂಮಿ ಮತ್ತು ಹಕ್ಕುಗಳಿಂದ ದೂರವಾಗಿರುವ ಮಹಿಳೆಯರೇ ನಿಜವಾದ ಅಲ್ಪಸಂಖ್ಯಾತರು. ನಮ್ಮ ದೇಶ ಆರ್ಥಿಕ ಭದ್ರತೆ ಇಲ್ಲದೆ. ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶ ಬಂಡವಾಳಶಾಹಿ ವ್ಯವಸ್ಥೆಗೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಉಪನ್ಯಾಸಕಿ ಡಾ.ಸೋಮಕ್ಕ ಇದ್ದರು. ಕಿರಣಕುಮಾರ ಸ್ವಾಗತಿಸಿದರು. ಯಮನೂರಪ್ಪ ಹಲವಾಗಲಿ ಪ್ರಾಸ್ತಾವಿಕ ಮಾತನಾಡಿದರು. ಅಲ್ಲಾಭಕ್ಷಿ ಚಳ್ಳಾರಿ ನಿರೂಪಿಸಿದರು.