ಏರು ಅಂದರೆ ಏರು. ಕೆಲವು ಕಡೆ ಬಂಡೆಯನ್ನು ಕೋತಿಯಂತೆ ಏರಬೇಕು. ಅಂತೂ 2 ಗಂಟೆಗೆ ಎತ್ತಿನಭುಜವನ್ನು ಏರಿ ಅಲ್ಲಿ ಉಸ್ಸಪ್ಪ ಎಂದು ಕುಳಿತು ನಿಟ್ಟುಸಿರುಬಿಟ್ಟೆ. ಅಲ್ಲಿ ಕುಳಿತು ಸುತ್ತಲೂ ಪ್ರಕೃತಿಯ ವಿಸ್ಮಯವನ್ನು ನೋಡುತ್ತಿರಬೇಕಾದರೆ ಮೇಲೆ ಹತ್ತಿ ಬಂದದ್ದು ಸಾರ್ಥಕ ಎಂಬ ಭಾವ ಮೂಡಿತು. ದೂರದಲ್ಲಿ ಅಮೇದಿಕಲ್ಲು, ಒಂಬತ್ತುಗುಡ್ಡ ಇತ್ಯಾದಿ ಬೆಟ್ಟಗಳು ಕಾಣುತ್ತವೆ. ಮುಂದೊಂದು ದಿನ ಅವನ್ನೂ ಏರಬೇಕು ಎಂಬ ಉತ್ಸಾಹ ಪುಟಿಯಿತು.
ಎತ್ತಿನಭುಜದ ಮೇಲೆ ಒಂದು ಧ್ವಜ ಹಾರಾಡುತ್ತಿತ್ತು. ಅಲ್ಲಿ ಕುಳಿತು ಛಾಯಾಚಿತ್ರ ಕ್ಲಿಕ್ಕಿಸಿಕೊಂಡೆವು. ಹೆಚ್ಚು ಹೊತ್ತು ಕೂತಿರಬೇಡಿ. ಕೆಳಗೆ ಇಳಿದು ಕಾಡುದಾರಿಯಲ್ಲಿ ಊಟ ಮಾಡೋಣ ಎಂದು ಅಲ್ಲಿಯೇ ಇದ್ದ ಫತೇಖಾನ್ ಹೇಳಿದ್ದರು. ನಾವು ಬೆಟ್ಟ ಹತ್ತುವಾಗ ಮುಂದೆ ಹತ್ತಿದ್ದವರೆಲ್ಲ ಇಳಿಯಲು ತೊಡಗಿದ್ದರು. ಹಾಗಾಗಿ ನಾವು ಹೆಚ್ಚು ಹೊತ್ತು ಕೂರದೆ 2.30ಕ್ಕೆ ಬೆಟ್ಟ ಇಳಿಯಲು ಅನುವಾದೆವು.
ನಾವು ಕೆಳಗೆ ಇಳಿದು ಕಾಡುದಾರಿಯಲ್ಲಿ ಸಾಗಿ ಮರದ ನೆರಳಿನಲ್ಲಿ ಕೂತು ಬುತ್ತಿ ಬಿಚ್ಚಿದೆವು. ನಮ್ಮ ಊಟ ಮುಗಿಯುವ ಮೊದಲು ಮಾರ್ಗದರ್ಶಕರು ನೀರು ತುಂಬಿ ತಂದು ಕೊಟ್ಟರು. ಊಟವಾಗಿ ತುಸು ವಿರಮಿಸಿ ಮುಂದೆ ನಡೆದೆವು. ಬೆಟ್ಟ ಹತ್ತುವಾಗ ಆಗಿದ್ದ ಆಯಾಸ ಇಳಿಯುವಾಗ ಇಲ್ಲವಾಗಿತ್ತು. ಹಾಗಾಗಿ ಕ್ಯಾಮೆರಾ ಬ್ಯಾಗಿನಿಂದ ಹೆಗಲಿಗೇರಿತು. ಇಳಿಯುವಾಗ ಹೆಚ್ಚು ವಿಶ್ರಾಂತಿ ಬಯಸದೆ ಒಂದೆರಡುಕಡೆ ವಿರಮಿಸಿದ್ದು ಬಿಟ್ಟರೆ ಎಲ್ಲೂ ನಿಲ್ಲದೆ ನಡೆದೆವು. ನಡೆದಷ್ಟೂ ಮುಗಿಯದ ದಾರಿ ಎನಿಸಿತ್ತು.
ಮರದ ಬೊಡ್ಡೆಗಳು ದಾರಿಗಡ್ಡ ಬಿದ್ದದ್ದನ್ನು ಬಗ್ಗಿ ದಾಟುತ್ತ ಬರಬೇಕಾದರೆ ಇನ್ನೊಂದಿಷ್ಟು ಸೌಂದರ್ಯ ಕ್ಯಾಮೆರಾದೊಳಗೆ ಹೋಯಿತು. ಮರ ಕಡಿದ ಸ್ಥಳದಲ್ಲಿ ಟಿಸಿಲೊಡೆದು ಚಿಗುರಿದ ದೃಶ್ಯ ಅದ್ಭುತ ಕಾವ್ಯದಂತಿತ್ತು.
ಜಲಥೆರಪಿ
ಅಂತೂ ನಾವು ಹೊಳೆ ಬಳಿ ಸಂಜೆ ಆರೂ ಕಾಲಕ್ಕೆ ಬಂದೇ ಬಿಟ್ಟೆವು. ಶೂಬಿಚ್ಚಿ ಹೊಳೆದಾಟಿ ಬಂಡೆಮೇಲೆ ಕುಳಿತು ನೀರಿಗೆ ಕಾಲು ಹಾಕಿ ಕುಳಿತೆವು. ಶೂಬಿಚ್ಚಿದಾಗ ಕಾಲುಬೆರಳುಗಳೆಲ್ಲ ನೋಯುತ್ತಿದ್ದುವು. ಇನ್ನು ಪುನಃ ಶೂ ಹಾಕಬೇಕಲ್ಲ ಎಂಬ ಚಿಂತೆ ಆಗಿತ್ತು. ಆದರೆ ಏನಾಶ್ಚರ್ಯ! ನೀರಿನಿಂದ ಎದ್ದಾಗ ಪಾದ ಹಾಗೂ ಬೆರಳುಗಳಲ್ಲಿ ನೋವೇ ಇಲ್ಲ. ಇದು ಜಲಥೆರಪಿಯ ಮ್ಯಾಜಿಕ್. ಇದು ನಮಗೆ ತುಂಬ ಖುಷಿ ಕೊಟ್ಟಿತು. ಕೆಲವರೆಲ್ಲ ನೀರಿಗೆ ಇಳಿದು ಮೈಚಾಚಿಕೊಂಡು ಒದ್ದೆಮುದ್ದೆಯಾಗಿ ಎದ್ದು ಚಳಿಯಲ್ಲಿ ನಡುಗಿದರು. ಎಲ್ಲರೂ ಬಸ್ ಬಳಿ ಬಂದು ಸೇರುವಾಗ ಗಂಟೆ ಏಳು ದಾಟಿತ್ತು.
ಹೊಳೆಗುಂಡಿಯಿಂದ ಶಿಶಿಲ ತಲುಪಿ ಪುರುಷೋತ್ತಮರ ಶ್ರೀಶೈಲ ಕ್ಯಾಂಟೀನಿನಲ್ಲಿ ಅವಲಕ್ಕಿ ಮಿಕ್ಶ್ಚರು, ಕಷಾಯ, ಕಾಫಿ ಹೊಟ್ಟೆ ಸೇರಿದಾಗ ಆದ ಆಯಾಸವೆಲ್ಲ ಮಾಯವಾಗಿ ನೆಮ್ಮದಿ ಆಯಿತು. ಪುರುಷೋತ್ತಮ ಅವರು ನಮಗೆಲ್ಲ ಆದರದ ಉಪಚಾರ ಮಾಡಿದ್ದರು. ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಅಯ್ಯಪ್ಪ, ಪಲ್ಲವಿ, ಅಡಪ ಹಾಗೂ ಫತೇಖಾನ್, ಸತೀಶಬಾಬು ಸಹಕರಿಸಿದ್ದರು, ಚಾರಣ ಸಮಯದಲ್ಲಿ ನಮ್ಮೆಲ್ಲರನ್ನೂ ಹುರಿದುಂಬಿಸಿ ಕರೆದೊಯ್ದಿದ್ದ ಫಲವಾಗಿ ಒಂದು ಸುಂದರ ತಾಣ ನೋಡಲು ಸಾಧ್ಯವಾಯಿತು.
ಎರಡು ದಿನ ಶಿಶಿಲದಲ್ಲಿ ಉಳಿದುಕೊಂಡು ಅಮೇದಿಕಲ್ಲು, ಎತ್ತಿನಭುಜ ಚಾರಣ ಹೋಗಬಹುದು. ಚಾರಣ ಹೋಗುವವರು ಆದಷ್ಟು ಗುಂಪಿನಲ್ಲಿ ಹೋಗಿ. ಶಿಶಿಲದಲ್ಲಿ ಅತ್ಯುತ್ತಮ ಊಟ ವಸತಿಗೆ ಪುರುಷೋತ್ತಮ ರಾವ್ 8762921154, ಚಾರಣ ಮಾರ್ಗದರ್ಶನಕ್ಕೆ ಚೆನ್ನಪ್ಪ 9481735895 ಇವರನ್ನು ಸಂಪರ್ಕಿಸಬಹುದು.