(ಭೀಮಾನದಿಯ ತಟದಲ್ಲಿ ಮಕ್ಕಳ ಮೀನು ಶಿಕಾರಿ)
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ‘ಮರಮಕಲ್’ ಈ ಮೀನುಗಾರರ ಮೂಲಸ್ಥಾನ. ಕಳೆದ ಹತ್ತು ವರ್ಷಗಳಿಂದ ಗೂಡೂರ ಗ್ರಾಮದ ಭೀಮಾ ನದಿಯ ದಂಡೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಸಂಬಂಧಿಸಿದ ಚುನಾವಣಾ ಗುರುತಿನ ಚೀಟಿ ಹಾಗೂ ಪಡಿತರ ಕಾರ್ಡುಗಳು ಕೆಲವು ಜನರಷ್ಟೇ ಹೊಂದಿದ್ದಾರೆ. ನದಿಯಲ್ಲಿ ಮೀನು ಹಿಡಿದು ಬದುಕಿನ ಪಯಣ ಸಾಗಿಸುವ ಅಂಬಿಗರ ಬದುಕು ನದಿ ಪಾಲಾಗಿದೆ.
ಚುಮುಚುಮು ಚಳಿಯಲ್ಲಿ ಭೀಮಾ ಒಡಲಿಗೆ ಇಳಿಯುವ ಮೀನುಗಾರರಿಗೆ ಭರಪೂರ ಮೀನು ಶಿಕಾರಿಯಾದರೆ ತೊಂದರೆ ಇಲ್ಲ. ಆದರೆ, ಹಲವು ಬಾರಿ ಮೀನುಗಳೇ ಸಿಗದಿದ್ದಾಗ ಒಪ್ಪೊತ್ತಿನ ಗಂಜಿಗೂ ಪರದಾಟ ತಪ್ಪಿದ್ದಲ್ಲ. ಬೇಸಿಗೆಯಲ್ಲಿ ಮೀನುಗಾರರ ಸಂಕಷ್ಟ ಹೆಚ್ಚು. ನದಿಯಲ್ಲಿ ನೀರಿನ ಹರವು ಕುಸಿದಂತೆಲ್ಲಾ ಮೀನುಗಾರರ ಮುಖ ಕೂಡ ಕಳೆಗುಂದುತ್ತದೆ. ಮಾರ್ಚ್, ಏಪ್ರಿಲ್, ಮೇ ನಲ್ಲಿ ಭಾರಿ ಬಿಸಿಲಿಗೆ ನದಿಯಲ್ಲಿ ಮೀನು ಸಿಗುವುದು ವಿರಳ. ಬೇಡಿಕೆಯೂ ಕುಸಿದಿರುತ್ತದೆ. ಇಂಥ ಸಂದರ್ಭದಲ್ಲಿ ಮೀನುಗಾರರ ನಿತ್ಯದ ಬದುಕು ಪ್ರವಾಹಕ್ಕೆ ಸಿಕ್ಕ ತರಗೆಲೆಯಂತಾಗಿರುತ್ತದೆ.
ಇನ್ನೊಂದೆಡೆ, ಮಕ್ಕಳಿಗೆ ಶಾಲೆಗೆ ಕಳುಹಿಸಬೇಕು ಎಂಬ ಇಚ್ಛೆ ಇದ್ದರೂ ಸಮೀಪದಲ್ಲಿ ಶಾಲೆ ಇಲ್ಲ ಎಂಬ ಕೊರಗು ಅಂಬಿಗರದ್ದು. ‘ನಮ್ ಜೀವನ ನಡಿಬೇಕಂದ್ರ ಮುಂಜಾನೆಯಿಂದ ಸಂಜಿ ತನಕ ಬಲೆಬಿಟ್ಟು ಮೀನು ಹಿಡಿಬೇಕು. ಇಲ್ಲಿ ಸಮೀಪದಾಗ ಯಾವ ಶಾಲೆಗಳು ಇಲ್ಲ. ದೂರ ದೂರ ಕಳಿಸಲು ತೊಂದ್ರೆ ಅಗ್ತೈತಿ. ಅದ್ಕೇ ಶಾಲೆಗೆ ಕಳಿಸಾಂಗಿಲ್ರಿ’ ಎನ್ನುತ್ತಾರೆ ಅಂಬಿಗ ಅಂಬರೀಷ.
ಮಹಿಳೆಯರ ಸ್ಥಿತಿಗತಿ ಚಿಂತಾಜನಕ: ಮೀನುಗಾರರ ಕುಟುಂಬದಲ್ಲಿ ಮಹಿಳೆಯರ ಸ್ಥಿತಿಗತಿ ಚಿಂತಾಜನಕವಾಗಿದೆ. ಶಾಲೆಗಳ ಮುಖವನ್ನೇ ನೋಡದವರ ಸಂಖ್ಯೆ ಹೆಚ್ಚಿದೆ. ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಮೇಲ್ನೋಟಕ್ಕೆ ಬಾಲ್ಯ ವಿವಾಹ ಆಗಿದೆ ಎಂದು ಗೊತ್ತಾಗುವುದಿಲ್ಲ. ಆದರೆ, ಮೀನುಗಾರರ ಕುಟುಂಬ ಮತ್ತು ಸಂಬಂಧಿಕರಿಗೆ ಮಾತ್ರ ಈ ವಿಚಾರ ಗೊತ್ತಿರುತ್ತದೆ. ಅವರೂ ಈ ವಿಚಾರವನ್ನು ಬಾಯಿಬಿಡುವುದಿಲ್ಲ. ಸಂಪೂರ್ಣ ಅನಕ್ಷರತೆಯ ಕೂಪದಲ್ಲಿ ಮೀನುಗಾರ ಹೆಣ್ಣುಮಕ್ಕಳನ್ನು ತಳ್ಳಿದ್ದಾರೆ. ಹೆಣ್ಣಿಗೆ ಓದು ಏಕೆ? ಎಂದು ಮೀನುಗಾರರ ಮುಖಂಡರು ಪ್ರಶ್ನಿಸುತ್ತಾರೆ. ಮೀನುಗಾರ ಪತಿಯ ಬೆಂಗಾವಲಿಗೆ ಹೆಣ್ಣು ಇರಬೇಕು ಎಂಬುದಾಗಿ ಅವರು ಸಮರ್ಥಿಸುತ್ತಾರೆ.
ಕನಿಷ್ಠ ಶಿಕ್ಷಣ ಇಲ್ಲದ ಮೀನುಗಾರರ ಕುಟುಂಬಗಳಿಗೆ ಕೇವಲ ರಾಜಕಾರಣಿಗಳಿಂದಷ್ಟೇ ಅಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳಿಂದಲೂ ದೊಡ್ಡ ಅನ್ಯಾಯವಾಗಿದೆ. ಅನಕ್ಷರತೆ ಅಧಿಕಾರಿಗಳ ವಂಚನೆಗೆ ಕಾರಣವಾಗಿದೆ. ಸರ್ಕಾರ ಮತ್ತು ಇಲಾಖೆ ಮೀನುಗಾರರ ನೆರವಿಗೆ ಜಾರಿಗೊಳಿಸಿರುವ ಒಂದು ಯೋಜನೆಯೂ ಈ ಭಾಗದಲ್ಲಿ ಅನುಷ್ಠಾನಗೊಂಡಿಲ್ಲ. ಮೀನುಗಾರರಿಗೆ ಬಲೆ ಮತ್ತಿತರ ಪರಿಕರ ನೀಡುವಂತೆ ಸರ್ಕಾರ ಆದೇಶಿಸಿದ್ದರೂ, ಮೀನುಗಾರರ ಕೈಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇವರ ಮುಗ್ಧತೆ ಹಾಗೂ ಅನಕ್ಷರತೆಯನ್ನು ಅಧಿಕಾರಿಗಳು ಬಳಸಿಕೊಂಡಿದ್ದಾರೆ.
ಶಾಶ್ವತ ಸೂರಿಲ್ಲ...
ಮೀನುಗಾರರಿಗೆ ಶಾಶ್ವತ ನೆಲೆ ಎಂಬುದಿಲ್ಲ. ಜಿಲ್ಲೆಯಲ್ಲಿ 340ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿವೆ. ಅವರಿಗೆ ಜಿಲ್ಲಾಡಳಿತ ಶಾಶ್ವತ ಸೂರು ಕಲ್ಪಿಸಿಲ್ಲ. ಸರ್ಕಾರ ಜಾರಿಗಳಿಸಿರುವ ‘ಮೀನುಗಾರರ ಮನೆಗಳು’ ಯೋಜನೆಯಡಿ ಇಲ್ಲಿನ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ನಿವೇಶನ ಕೊರತೆ ಎಂಬುದಾಗಿ ಅಧಿಕಾರಿಗಳು ಸಬೂಬು ಹೇಳಿ ಅನುದಾನವನ್ನು ಸರ್ಕಾರದ ಬೊಕ್ಕಸಕ್ಕೆ ವಾಪಸ್ ಕಳುಹಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಬಲೆಯನ್ನು ಸಕಾಲಕ್ಕೆ ನೀಡುವುದಿಲ್ಲ. ತುಂಬಾ ಕಳಪೆ ಬಲೆಯಿಂದ ಮೀನು ಶಿಕಾರಿ ಕಷ್ಟ ಎಂದು ಮೀನುಗಾರ ಮರಮ್ಕಲ್ ಗ್ರಾಮದ ಮರಿಯಪ್ಪ ಹೇಳುತ್ತಾರೆ.
ಚಿಣ್ಣರ ಅಂಗಳ, ಟೆಂಟ್ಶಾಲೆಯಂತಹ ಯೋಜನೆಗಳನ್ನು ಸರ್ಕಾರ ನಿಲ್ಲಿಸಿದೆ. ಎಸ್ಬಿಟಿ ಯೋಜನೆ ಜಾರಿಯಲ್ಲಿದೆ (ಸ್ಕೂಲ್ಬೇಸ್ ಟ್ರೇನಿಂಗ್). ತಾಲ್ಲೂಕಿನಲ್ಲಿ ಐದು ವಲಯಗಳನ್ನಾಗಿ ಮಾಡಲಾಗಿದ್ದು, ಐವರು ದಾಖಲಾತಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಾಗಾಗಿ, ಆನೂರ.ಕೆ, ಗುಡೂರ ಭಾಗದ ಮೀನುಗಾರರ ಮಕ್ಕಳ ದಾಖಲಾತಿಯೂ ಆಗಿದೆ. ಮಕ್ಕಳ ಗೈರು ಹಾಜರಾತಿ ಹೆಚ್ಚಿದೆ. ಅದನ್ನು ತಪ್ಪಿಸಲು ಪೋಷಕರು ಮುಂದಾಗಬೇಕು ಎನ್ನುವುದು ಯಾದಗಿರಿಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಣ್ಣನ್ ಅವರ ಅಭಿಪ್ರಾಯ.
**
ಮಕ್ಕಳ ಕಲಿಕೆ ಕುಂಠಿತ