(ಗೋಶಾಲೆಯಲ್ಲಿ ಮಧ್ಯಾಹ್ನದ ಸಾಮೂಹಿಕ ಭೋಜನಕ್ಕೆ ಸಿದ್ಧತೆ)
‘ಜೀವಮಾನದಲ್ಲಿ ಇನ್ನೊಬ್ಬರಿಂದ ಏನನ್ನೂ ಬೇಡದ ನಾವು ಈಗ ಹುಲ್ಲು ಬೇಡುವ ಸ್ಥಿತಿ ಬಂದಿದೆ. ನಮ್ಮ ಬದುಕಿಗೆ ಇನ್ನೇನು ಆಗಬೇಕು ಸ್ವಾಮಿ’ ಎಂಬ ಮಾತಿನಲ್ಲಿ ಅವರ ಮನಸು ಚುಚ್ಚುತ್ತಿದ್ದ ಕೂಳೆಯೊಂದು ಹೊರಗೆ ಬಿದ್ದಂತೆ ಆಯಿತು.
‘ಐದು ಎಕರೆ ಭೂಮಿಗೆ ರಾಗಿ ಬಿತ್ತಿದ್ವಿ. ಕಡಿಮೆ ಅಂದ್ರೂ 200 ಹೊರೆ ಹುಲ್ಲು, 8 ಮೂಟೆ ರಾಗಿ ಆಗಬೇಕಿತ್ತು. ಈ ಸಲ ನೋಡಿ ಎರಡು ಮೂಟೆ ರಾಗಿ 30 ಪಿಂಡಿ ಹುಲ್ಲೂ ಸಿಗಲಿಲ್ಲ’ ಎಂದು ಬೋರಪ್ಪ ತಮ್ಮ ಪರಿಸ್ಥಿತಿ ವಿವರಿಸಿದರು.
ತಿಳಿಮುತ್ತಿನ ಬಣ್ಣದ ಇನ್ವಿಟೇಶನ್ ಕಾರ್ಡ್ ಒಳಗೆ ಅಡಗಿಸಿಟ್ಟಿದ್ದ ಮೇವಿನ ಕಾರ್ಡ್ ಹಿಡಿದು ಲಗುಬಗೆಯಿಂದ ಓಡಾಡುತ್ತಿದ್ದವರ ಹೆಸರು ಸಿದ್ದಮ್ಮ. ದನಗಳ ಪಕ್ಕದಲ್ಲೇ ಕುಳಿತು ಮೊಮ್ಮಕ್ಕಳು ಓದಿಕೊಳ್ಳುತ್ತಿದ್ದರು. ಅವರ ಬದಿಯಲ್ಲೇ ಅಜ್ಜ ರಾಗಿ ಮುದ್ದೆ ಮುರಿಯುತ್ತಿದ್ದರು.
‘ಒಂದು ಹಸು ಅಥವಾ ಎಮ್ಮೆಗೆ 5 ಕೆ.ಜಿ. ಮೇವು ಕೊಡ್ತಾರೆ. ಕರುಗಳಿಗೂ ಅದೇ ಲೆಕ್ಕದಲ್ಲಿ ಮೇವು ಕೊಡ್ತಿರೋದ್ರಿಂದ ದೊಡ್ಡ ದನಗಳಿಗೆ ಅನುಕೂಲ. ರಾತ್ರಿ ಉಳಿಯೋ ದನಗಳಿಗೆ ಇನ್ಮೇಲೆ ಹೆಚ್ಚುವರಿಯಾಗಿ 2 ಕೆ.ಜಿ. ಮೇವು ಕೊಡ್ತಾರಂತೆ. ಗೋಶಾಲೆ ಮಾಡಿ ಮೇವು ಕೊಡೋ ವ್ಯವಸ್ಥೆ ಮಾಡದಿದ್ರೆ ನಾವು ರಾಸುಗಳನ್ನು ಉಳಿಸಿಕೊಳ್ಳೋಕೆ ಆಗ್ತಾ ಇರ್ಲಿಲ್ಲ’ ಎಂದು ಸಿದ್ದಮ್ಮ ನಿಜದ ಮಾತಾಡಿದರು.
ನಾಟಿಹಸುಗಳಿಗಿಂತ ಸೀಮೆಹಸುಗಳಿಗೆ ಬರದ ಬಿಸಿ ತೀವ್ರವಾಗಿ ತಟ್ಟಿದೆ. ಜಮೀನು ಇಲ್ಲದಿದ್ದರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕೊರಟಗೆರೆ ತಾಲ್ಲೂಕಿನಲ್ಲಿ ಗಮನಾರ್ಹ ಪ್ರಮಾಣದಲ್ಲಿದೆ. ಹಾಲನ್ನೇ ಜೀವನಾಧಾರ ಮಾಡಿಕೊಂಡಿದ್ದ ಇಂಥವರೂ ಬರದ ಬಿಸಿಗೆ ಕಂಗಾಲಾಗಿದ್ದಾರೆ.
ತೋವಿನಕೆರೆಯ ನಾಗರಾಜು ಅವರು 4 ಸೀಮೆಹಸು ಸಾಕಿದ್ದಾರೆ. ವರ್ಷಕ್ಕೆ 500 ಹೊರೆ ಹುಲ್ಲು, ವಾರಕ್ಕೆ 1 ಮೂಟೆ ಫೀಡ್ ಮತ್ತು 1 ಮೂಟೆ ಬೂಸಾ ಕೊಂಡು ಹಸುಗಳ ಹೊಟ್ಟೆ ತುಂಬಿಸುತ್ತಿದ್ದರು. ಅವರ ಹಸುಗಳು ಒಂದು ದಿನಕ್ಕೆ ಸರಾಸರಿ 34 ಲೀಟರ್ ಹಾಲು ಕೊಡುತ್ತಿದ್ದವು.
‘ಬರದಿಂದಾಗಿ ಅಕ್ಕಪಕ್ಕದ ಊರಿನವರು ಈ ವರ್ಷ ಮೇವು ಮಾರಲೇ ಇಲ್ಲ. ಹಾಲಿನ ಕರಾವೂ ಕಡಿಮೆಯಾಯಿತು’ ಎಂದು ನಿಟ್ಟುಸಿರು ಬಿಡುವ ನಾಗರಾಜು ಅವರಂಥವರ ಎದುರಿಗೆ ಉಳಿದಿರುವುದು ‘ಈ ವರ್ಷನಾದ್ರೂ ಚೆನ್ನಾಗಿ ಮಳೆ ಆದ್ರೆ ಸಾಕು’ ಎಂಬ ನಿರೀಕ್ಷೆ ಮಾತ್ರ.
ಹುಣಸೆ ಒಣಗುವಂಥ ಬರ: ಹುಣಸೆಗೆ ಬರ ಸಹಿಷ್ಣು ಮರ ಎಂಬ ಹೆಗ್ಗಳಿಕೆ. ಎಂಥ ಬರಗಾಲದಲ್ಲೂ ರೈತರ ಕೈ ಹಿಡಿಯುವ ಬೆಳೆ ಇದು. ಆದರೆ ಈ ಬಾರಿ ಈ ಮಾತಿಗೂ ಅಪವಾದ ಒದಗಿದೆ. ರೈತರು ‘ಹುಣಸೆ ಒಣಗುವಂಥ ಬರ’ ಎಂದೇ 2017ಕ್ಕೆ ನಾಮಕರಣ ಮಾಡಿಬಿಟ್ಟಿದ್ದಾರೆ. ತೋವಿನಕೆರೆಗೆ ಸಮೀಪದಲ್ಲಿಯೇ ಇರುವ 100 ಮನೆಗಳ ಊರು ಚಿಕ್ಕಣ್ಣನಹಳ್ಳಿ. ಗ್ರಾಮದಲ್ಲಿ ಹುಣಸೆ ಖರೀದಿ, ಸಂಸ್ಕರಣೆಯ ಗೃಹೋದ್ಯಮ ವರ್ಷದಲ್ಲಿ ನಾಲ್ಕು ತಿಂಗಳು ನಡೆಯುತ್ತದೆ. ಆದರೆ ಈ ವರ್ಷ ಅಲ್ಲಿಯೂ ಅಂಥ ಚಟುವಟಿಕೆ ಇಲ್ಲ.
‘ಸಿಪ್ಪೆ ತುಂಬುವಷ್ಟು ಹಣ್ಣು ಬಂದಿಲ್ಲ. ಬೆಳೆ ಕಡಿಮೆಯಾಗಿದೆ’ ಎಂದು ಹುಣಸೆ ಮರ ಗುತ್ತಿಗೆ ಹಿಡಿಯುವ ನಾಗರಾಜ ಪ್ರತಿಕ್ರಿಯಿಸಿದರು.
ಕೊರೆಸಿ ಕೊರೆಸಿ ಸುಸ್ತಾದರು
ರಾಗಿ– ಹುರುಳಿಯಂಥ ಒಣಭೂಮಿ ಬೆಳೆಗಳಿಗೆ ಸೂಕ್ತ ಎನಿಸುವ ದಿಣ್ಣೆ ಭೂಮಿ ಇರುವ ಚಿಕ್ಕಣ್ಣನಹಳ್ಳಿಯಲ್ಲಿ ಈಗ ಒಣಗಿನಿಂತ ಅಡಿಕೆ– ತೆಂಗಿನ ಮರಗಳು ಕಾಣಿಸುತ್ತಿವೆ. ಊರಿನ ಸುತ್ತಮುತ್ತ ಇದ್ದ 60 ಕೊಳವೆಬಾವಿಗಳ ಪೈಕಿ 50 ಒಣಗಿವೆ. ಕೇವಲ ಒಂದೇ ತಿಂಗಳಲ್ಲಿ 20 ಕೊಳವೆಬಾವಿಗಳನ್ನು ಹೊಸದಾಗಿ ಕೊರೆಸಲಾಗಿದೆ. ಕೊಳವೆಬಾವಿಗಳ ಆಳ 1000 ಅಡಿ ಮುಟ್ಟಿದೆ. ಒಂದು ಕೊಳವೆಬಾವಿ ಕೊರೆಸಲು ಕನಿಷ್ಠ ₹2 ಲಕ್ಷ ಖರ್ಚಾಗುತ್ತೆ ಎಂದರೆ 20 ಕೊಳವೆಬಾವಿ ಕೊರೆಸಲು ಎಷ್ಟು ಖರ್ಚಾಗಿರಬಹುದು? ನೀರು ಬಿದ್ದ ಕೊಳವೆಬಾವಿಗಳ ಗಂಟಲು ಯಾವಾಗ ಒಣಗೀತು ಎಂಬುದು ಉತ್ತರ ಸಿಗದ ಪ್ರಶ್ನೆ.
ದೂರದ ಕಬ್ಬಿಗೆರೆ ಕೆರೆಯಲ್ಲಿರುವ ಕೊಳವೆಬಾವಿ ಕುಡಿಯುವ ನೀರು ಕೊಡುತ್ತಿದೆ. ನೀರಿನ ಪ್ರಮಾಣ ಅಲ್ಲಿಯೂ ಕಡಿಮೆಯಾಗುತ್ತಿದೆ. ಮುಂದೇನು ಎಂಬುದು ಇಂಥ ಹಳ್ಳಿಗಳ ಜನರ ಯಕ್ಷಪ್ರಶ್ನೆ.
ಗೋಶಾಲೆಗೆ ರಾಸುಗಳನ್ನು ಕರೆತಂದಿರುವ ತುರುಗಾಹಿಗಳ ಪೈಕಿ ಅನೇಕರು ಸಂಜೆಗೂ ವಾಪಸ್ ಊರಿಗೆ ಹೋಗುವುದಿಲ್ಲ. ಇಂಥವರಿಗೆ ಒಪ್ಪತ್ತು ಮಾತ್ರ ಮನೆಗಳಿಂದ ಡಬ್ಬಿ ಬರುತ್ತದೆ. ಉಳಿದ ಎರಡು ಹೊತ್ತು ಹಸಿದುಕೊಂಡೇ ಇರಬೇಕಾಗಿದೆ.
‘ಕಳೆದ ವರ್ಷ ಡಿಸಿಸಿ ಬ್ಯಾಂಕ್ ವತಿಯಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಿದ್ದರು. ಈ ವರ್ಷವೂ ಯಾರಾದರೂ ಮುಂದೆ ಬಂದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗೋಶಾಲೆಯಲ್ಲಿಯೇ ನೆಲೆ ನಿಂತಿರುವ ರೈತರು.
**
ರಾಸುಗಳ ಆರೋಗ್ಯ ಚೆನ್ನಾಗಿದೆ
ಈ ಭಾಗದಲ್ಲಿ ಬರಗಾಲವಿದ್ದರೂ ರಾಸುಗಳು ಬಡಕಲಾಗಿಲ್ಲ. ಸದ್ಯಕ್ಕೆ ಪ್ರತಿ ಪ್ರಾಣಿಗೆ ಪ್ರತಿದಿನ ಬೆಳಿಗ್ಗೆ 5 ಕೆ.ಜಿ. ಮೇವು ಕೊಡುತ್ತಿದ್ದೇವೆ. ರಾತ್ರಿ ಇಲ್ಲೇ ಉಳಿಯುವ ಪ್ರಾಣಿಗಳಿಗೆ ಹೆಚ್ಚುವರಿಯಾಗಿ 2 ಕೆ.ಜಿ. ಕೊಡುವ ಆಲೋಚನೆ ಹಿರಿಯ ಅಧಿಕಾರಿಗಳಿಗೆ ಇದೆ. ಗೋಶಾಲೆಗೆ ಬಂದಿರುವ ಎಲ್ಲ ದನ– ಎಮ್ಮೆಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿದ್ದೇವೆ ಎಂದು ಪಶು ವೈದ್ಯಾಧಿಕಾರಿ ಮಂಜುನಾಥ ಹೇಳಿದರು.