ರಾಮನಗರ: ‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಂಬಿ ನಾನು ರಾಜಕೀಯಕ್ಕೆ ಬಂದಿಲ್ಲ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಮತ್ತೆ ಅವರ ಬಳಿ ನಿಲ್ಲುವ ಜಾಯಮಾನವೂ ನನ್ನದಲ್ಲ’ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದ ಯಾರಬ್ ನಗರ ಬಡಾವಣೆಯ ನೂರಾನಿ ಮಸೀದಿ ಸಮೀಪ ಭಾನುವಾರ ರಾತ್ರಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜೆಡಿಎಸ್ನಲ್ಲಿ ಗೌಡರ ಕುಟುಂಬ ಹೊರತುಪಡಿಸಿ ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದ ನಾಯಕರ ಬೆಳವಣಿಗೆಗೆ ಅವಕಾಶವಿಲ್ಲ. ಹೀಗಾಗಿಯೇ ಅನೇಕ ಅಲ್ಪಸಂಖ್ಯಾತ ನಾಯಕರು ಜೆಡಿಎಸ್ ತೊರೆದಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಿಂದಲೇ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು’ ಎಂದರು.
‘ನಾನು ಮತ್ತು ಸ್ನೇಹಿತರು ಜೆಡಿಸ್ನಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದೆವು. ಆದರೆ ಪಕ್ಷದ ವರಿಷ್ಠರು ನಮ್ಮ ಬಗ್ಗೆ ಇಲ್ಲದ ಮಾತುಗಳನ್ನಾಡಿದರು. ನಮಗೂ ನಮಗೂ ಸ್ವಂತಿಕೆ ಎಂಬುದಿದೆ. ಅದರ ಮೇಲೆಯೇ ರಾಜಕಾರಣ ಮಾಡುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕರ್ನಾಟಕದಲ್ಲಿ ಕೋಮು ಸೌಹಾರ್ದ ಹದಗೆಡುವ ವಾತಾವರಣ ನಿರ್ಮಾಣ ವಾಗುತ್ತಿದೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಜಾತ್ಯತೀತ ನಿಲುವಿನ ಪಕ್ಷ ಬೆಂಬಲಿಸಬೇಕು’ ಎಂದು ಕೋರಿದರು.